ಜೂ. 11ರಿಂದ ಜಿಲ್ಲೆಯಾದ್ಯಂತ ಚರ್ಮ ಗಂಟು ವಿರುಧ್ಧ ಉಚಿತ ಲಸಿಕಾ ಅಭಿಯಾನ

(ನ್ಯೂಸ್ ಕಡಬ) newskadaba.com  ಮಂಗಳೂರು, ಜೂ. 09. ಕಳೆದ ಸಾಲಿನ ಮಳೆಗಾಲ ಹಾಗೂ ನಂತರದ ಅವಧಿಯಲ್ಲಿ ಚರ್ಮಗಂಟು ರೋಗವು ಜಾನುವಾರುಗಳಲ್ಲಿ ರಾಜ್ಯಾದಾದ್ಯಂತ, ಅದೇ ರೀತಿ ದ.ಕ ಜಿಲ್ಲೆಯ ಹೆಚ್ಚಿನ ಹಳ್ಳಿಗಳಲ್ಲಿ ಕಾಣಿಸಿಕೊಂಡಿದ್ದು, 400ಕ್ಕೂ ಅಧಿಕ ಜಾನುವಾರುಗಳು ಮರಣ ಹೊಂದಿರುತ್ತವೆ ಹಾಗೂ ಒಟ್ಟಾರೆ ಹಾಲಿನ ಇಳುವರಿ ಕೂಡಾ ಗಣನೀಯವಾಗಿ ಕಡಿಮೆಯಾಗಿರುತ್ತದೆ.

ಈ ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ ಹಬ್ಬುತ್ತದೆ. ರೋಗ ತಗುಲಿದ ಜಾನುವಾರುಗಳು ಜ್ವರದಿಂದ ಬಳಲಿ ಮೈ ಮೇಲೆ ಗಂಟುಗಳು ಬಂದು, 2 ರಿಂದ 5 ಶೇಕಡಾ ಜಾನುವಾರುಗಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಮಳೆಗಾಲ ಆರಂಭವಾದ ತಕ್ಷಣ ನೊಣ, ಸೊಳ್ಳೆಗಳು ಜಾಸ್ತಿಯಾಗಿ ಪುನಃ ರೋಗ ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುನ್ನೆಚ್ಛರಿಕಾ ಕ್ರಮವಾಗಿ ಪ್ರತೀ ಜಾನುವಾರುಗಳಿಗೆ ಸಮಾರೋಪಾದಿಯಲ್ಲಿ ಚರ್ಮ ಗಂಟು ವಿರುಧ್ಧ ಉಚಿತ ಲಸಿಕಾ ಅಭಿಯಾನವನ್ನು ಜಿಲ್ಲೆಯಾದ್ಯಂತ ಜೂ.11ರಿಂದ ಜೂ. 30ರವರೆಗೆ ಹಮ್ಮಿಕೊಂಡಿದೆ. ಕಳೆದ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಲಸಿಕೆ ನೀಡಲಾದ ಜಾನುವಾರುಗಳಿಗೂ ಈ ಬಾರಿ ಪುನಃ ಲಸಿಕೆ ಹಾಕಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಹೈನುಗಾರರು ಲಸಿಕೆಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಅಥವಾ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಸ್ಥೆಗಳನ್ನು ಸಂಪರ್ಕಿಸಲು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group