ಮಿತ್ತಮಜಲು: ನಕ್ಸಲರ ಆಗಮನದ ಹಿನ್ನೆಲೆ ► ನಕ್ಸಲ್ ನಿಗ್ರಹ ದಳದ ಕೂಂಬಿಂಗ್ ಸ್ಥಗಿತ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.20. ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕೂಂಬಿಂಗನ್ನು ಶುಕ್ರವಾರದಂದು ಅಂತ್ಯಗೊಂಡಿತು.

ಜ.14 ರಂದು ಮಿತ್ತಮಜಲಿನ ಮೋಹನ, ಲೀಲಾ ಹಾಗೂ ಸುರೇಶ ಎಂಬವರ ಮನೆಗೆ ನಕ್ಸಲರು ಬಂದು ಅಕ್ಕಿ, ಪಡಿತರ ಸಾಮಾಗ್ರಿ ಪಡೆದುಕೊಂಡು ಹೋಗಿದ್ದರು. ಈ ಬಗ್ಗೆ ಪೊಲೀಸರಿಗೆ ಸೋಮವಾರ ರಾತ್ರಿ ಮಾಹಿತಿ ದೊರೆತು, ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆಯನ್ನು ಕರೆಸಿ, ಜ.16 ಮಧ್ಯಾಹ್ನದಿಂದ ಶಿಶಿಲ, ಶಿರಾಡಿ ರಕ್ಷಿತಾರಣ್ಯದಲ್ಲಿ ಕೂಂಬಿಂಗ್ ಆರಂಭಿಸಲಾಗಿತ್ತು. ಹೆಬ್ರಿ ಎಎನ್ಎಫ್  ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಕಿಗ್ಗ ಎಎನ್ಎಫ್ ಸಬ್ ಇನ್ಸ್‌ಪೆಕ್ಟರ್ ಅಮರೇಶ್ ನೇತೃತ್ವದಲ್ಲಿ ಎರಡು ತಂಡಗಳು ಪ್ರತ್ಯೇಕವಾಗಿ ಕೊಂಬಿಂಗ್ ನಡೆಸುತ್ತಿದ್ದವು. ಜ.18 ರಂದು ಸಂಜೆ ತಿಮ್ಮಪ್ಪ ನಾಯ್ಕ ನೇತೃತ್ವದ ತಂಡವು ಕೂಂಬಿಂಗ್ ಮುಗಿಸಿ, ಕೇಂದ್ರ ಸ್ಥಾನವಾದ ಹೆಬ್ರಿ ತೆರಳಿತ್ತು. ಜ.19ರಂದು ಬೆಳಗ್ಗೆ ಅಮರೇಶ್ ನೇತೃತ್ವದ ತಂಡ ಕೂಡಾ ಕೇಂದ್ರ ಸ್ಥಾನವಾದ ಕಿಗ್ಗಕ್ಕೆ ತೆರಳಿದೆ. ಈ ತಂಡಗಳು ಶಿಶಿಲ, ದೇರಗುಂಡಿ, ಮಿತ್ತಮಜಲು, ಉದನೆ, ಅರ್ಬಿಗುಡ್ಡೆ, ಚೆರ್ವತ್ತಡ್ಕ ಗುಡ್ಡೆ, ನೇರೆಂಕಿ ಮಲೆ, ಕಬ್ಬಿನಾಲೆ ರಕ್ಷಿತಾರಣ್ಯದಲ್ಲಿ ನಕ್ಸಲರಿಗಾಗಿ ಕೂಂಬಿಂಗ್ ನಡೆಸಿವೆ. ಆದರೆ ಎಲ್ಲೂ ನಕ್ಸಲರ ಸುಳಿವು ದೊರೆಯದ್ದರಿಂದ ಮೇಲಾಧಿಕಾರಿಗಳ ಆದೇಶದಂತೆ ಕೂಂಬಿಂಗ್ ಅನ್ನು ಅಂತ್ಯಗೊಳಿಸಲಾಗಿದೆ.

ಈ ನಡುವೆ ಜ.17ರಂದು ರಾತ್ರಿ ನಕ್ಸಲ್ ನಿಗ್ರಹ ದಳದ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಹಾಗೂ ಡಿವೈಎಸ್ಪಿ ದಿನೇಶ್ ಕುಮಾರ್ ಅವರು ಮಿತ್ತಮಜಲಿಗೆ ಭೇಟಿ ನೀಡಿ, ನಕ್ಸಲರು ಭೇಟಿ ನೀಡಿದ ಮನೆಯವರನ್ನು ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿದರು.

error: Content is protected !!

Join the Group

Join WhatsApp Group