ಮಂಗಳೂರು: ಸಂಜೀವ ಶೆಟ್ಟಿ ವಸ್ತ್ರ ಮಳಿಗೆಯಲ್ಲಿ ಶೂಟೌಟ್ ► ಹಫ್ತಾ ತಂಡದ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.08. ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಸಂಜೀವ ಶೆಟ್ಟಿ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವನಿಂದ ಶೂಟೌಟ್ ನಡೆದ ಘಟನೆ ಶುಕ್ರವಾರದಂದು ರಾತ್ರಿ ನಡೆದಿದೆ.

ಜರ್ಕಿನ್ ಕ್ಯಾಪ್ ಹಾಕಿಕೊಂಡು ತಲೆ ಮುಚ್ಚಿಕೊಂಡು ಬಂದಿದ್ದ ದುಷ್ಕರ್ಮಿಗಳು ಮಳಿಗೆ ಸಿಬ್ಬಂದಿ ಮಹಾಲಿಂಗ ನಾಯ್ಕ(40)ಗೆ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಗಾಯಗೊಂಡವರನ್ನು ನಗರದ ಯೇನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಅವರ ದೇಹದ ತೊಡೆಭಾಗಕ್ಕೆ ಗುಂಡು ತಗುಲಿದೆ. ಗ್ರಾಹಕನ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಟೀ ಶರ್ಟ್ ಕೇಳಿದ್ದಾನೆ. ಅಂಗಡಿಯವರು ಅಂಗಡಿ ಮುಚ್ಚುವ ಸಮಯವಾಗಿದ್ದರಿಂದ ತರಾತುರಿಯಲ್ಲಿದ್ದು ನಾಳೆ ಬರುವಂತೆ ಸೂಚಿಸಿದ್ದಾರೆ. ಅಷ್ಟರಲ್ಲಿ ಮಹಾಲಿಂಗ ನಾಯ್ಕ ಬಾಗಿಲು ಮುಚ್ಚಲು ಸಿದ್ಧತೆ ಮಾಡುತ್ತಿದ್ದಾಗ ದುಷ್ಕರ್ಮಿ ಹಿಂನಿಂದ ರಿವಾಲ್ವರ್ ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಅಂಗಡಿಯಲ್ಲಿ ಅಂಗಡಿ ಮಾಲಕ ಸಂಜೀವ ಶೆಟ್ಟಿ ಸೇರಿದಂತೆ ಮೂರು ಮಂದಿಯಿದ್ದರು.

Also Read  ಬೆಳ್ತಂಗಡಿ:ಯುವಕರಿಬ್ಬರ ಮೇಲೆ ಹಲ್ಲೆ

ಘಟನೆ ಬಗ್ಗೆ ತಿಳಿಯುತ್ತಿದಂತೆ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿಗಳಾದ ಉದಯ ನಾಯ್ಕ್, ಮಂಜುನಾಥ ಶೆಟ್ಟಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಲ್ಲಿ ಭೂಗತ ಪಾತಕಿಗಳು ಹಫ್ತಕ್ಕಾಗಿ ಕೃತ್ಯ ಎಸಗಿಸುವ ಶಂಕೆ ವ್ಯಕ್ತವಾಗಿದೆ.

error: Content is protected !!
Scroll to Top