ಕಾರಿನಲ್ಲಿ ಬಂದ ಮುಸುಕುಧಾರಿಗಳಿಂದ ಟೆಂಪೋ ಅಡ್ಡಗಟ್ಟಿ ನಗದು ದರೋಡೆ ➤ ವ್ಯಕ್ತಿಗೆ ತಲವಾರಿನಿಂದ ಹಲ್ಲೆ…!

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 04. ರಿಟ್ಝ್ ಕಾರಿನಲ್ಲಿ ಬಂದ ಮುಸುಕುಧಾರಿಗಳ ತಂಡವೊಂದು ಮೀನು ಸಾಗಾಟದ ಟೆಂಪೋವನ್ನು ತಡೆದು ನಿಲ್ಲಿಸಿ ಎರಡು ಲಕ್ಷ ರೂ ದರೋಡೆ ಮಾಡಿ ವ್ಯಾಪಾರಿಗೆ ಹಲ್ಲೆಗೈದು ಪರಾರಿಯಾದ ಘಟನೆ ರಾ.ಹೆ. 66ರ ಆಡಂಕುದ್ರು ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಾಪಾರಿ ಮುಸ್ತಫಾ ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ತನ್ನ ಟೆಂಪೊದಲ್ಲಿ ಮೀನು ತರಲೆಂದು ಮಂಗಳೂರಿನ ದಕ್ಕೆಗೆ ತೆರಳಿದ್ದು, ಟೆಂಪೋ‌ ಆಡಂಕುದ್ರು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಹಿಂದಿನಿಂದ ಬಂದ ರಿಟ್ಝ್ ಕಾರೊಂದು ಇವರನ್ನು ತಡೆದು ನಿಲ್ಲಿಸಿ ಕಾರಿನಲ್ಲಿದ್ದ ಮೂರು ಮುಸುಕುಧಾರಿಗಳಳು ಕೆಳಗಿಳಿದು ಬಂದು ಮುಸ್ತಪಾ ಅವರಲ್ಲಿ ಹಣದ ಬ್ಯಾಗ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಮುಸ್ತಪಾ ಬ್ಯಾಗ್ ಕೊಡಲು ನಿರಾಕರಿಸಿದಾಗ ಮುಸುಕುಧಾರಿಗಳು ತಲವಾರು ತಂದು ಮುಸ್ತಫಾ ಅವರ ಕುತ್ತಿಗೆಗೆ ಇಟ್ಟು ಬೆದರಿಸಿ ಹಣ ಎಗರಿಸಿದ್ದು, ಈ ವೇಳೆ ವಿರೋಧಿಸಿದ ಮುಸ್ತಫಾ ಅವರು ತಲವಾರಿನ ಅಲಗನ್ನು ಎರಡೂ ಕೈಗಳಲ್ಲಿ ಗಟ್ಟಿಯಾಗಿ ಹಿಡಿದಿದ್ದು ಮುಸುಕುಧಾರಿಗಳು ತಲವಾರನ್ನು ಎಳೆದಾಗ ಮುಸ್ತಫಾರ ಎರಡೂ ಕೈಗಳಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group