ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ನಿರ್ಬಂಧಿಸಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

(ನ್ಯೂಸ್ ಕಡಬ) newskadaba.com ಫೆ. 16. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಾದ್ಯಂತ ಹಲವಾರು ವಿದ್ಯಾರ್ಥಿನಿಯರಿಗೆ ಶಾಲೆಗೆ ನಿರ್ಬಂಧಿಸಲಾಗಿದ್ದು ಇದು ಅಸಹ್ಯಕರವಾಗಿದೆ ಹಾಗೂ ಈ ನಿರ್ಬಂಧ ವಿಧಿಸಿದ ಶಿಕ್ಷಕರ ವಿರುಧ್ದ ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸುತ್ತಿದೆ.

ಉಡುಪಿ ಹಿಜಾಬ್ ಪ್ರಕರಣವು ಹೈಕೋರ್ಟ್‌ನಲ್ಲಿ ವಿಚಾರಣೆಯಾಗುತ್ತಿದೆ. ಈ ಮಧ್ಯೆ ನ್ಯಾಯಾಲಯವು ಫೆಬ್ರವರಿ ಹತ್ತರಂದು ಮಧ್ಯಂತರ ಆದೇಶವನ್ನೂ ನೀಡಿದೆ. ಈ ಆದೇಶವು ದಾವೆ ಹೂಡಿರುವ ವಿದ್ಯಾರ್ಥಿಗಳಿಗೆ ಅಂದರೆ ಉಡುಪಿಯ ಮಹಿಳಾ ಪಿಯು ಕಾಲೇಜು ಹಾಗೂ ಕುಂದಾಪುರದ ಪಿಯು ಕಾಲೇಜು ಮತ್ತು ಸಮವಸ್ತ್ರ ಸಂಹಿತೆ ಮಾಡಿದ ಸಂಸ್ಥೆಗಳಿಗೆ ಮಾತ್ರ ಎಂದು ಆದೇಶದ ಹನ್ನೊಂದನೆ ಅಂಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ ಇಂದು, ಈ ಮೊದಲೇ ಶಿರವಸ್ತ್ರ ಧರಿಸುತ್ತಿದ್ದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಾಲಾಡಳಿತ ಮಂಡಳಿ ಮತ್ತು ಶಿಕ್ಷಕರು ಶಾಲಾ ಆವರಣದ ಮುಂಭಾಗದಲ್ಲೇ ತಡೆದು ಹೆದರಿಸಿ ಸ್ಕಾರ್ಫ್ ಬಿಚ್ಚುವಂತೆ ಮತ್ತು ಕೆಲ ಮುಸ್ಲಿಂ ಶಿಕ್ಷಕಿಯರನ್ನು ಗೇಟ್ ಬಳಿಯೇ ಬುರ್ಖಾ ಬಿಚ್ಚಿಸುವ ಅಮಾನವೀಯ ಘಟನೆಗಳು ನಡೆದಿದೆ. ಅಲ್ಲದೇ ಮಹಿಳೆಯರ ಖಾಸಗಿ ವಿಚಾರಗಳನ್ನು ಮಾಧ್ಯಮವೂ ಕೂಡ ಬೇಕಾ ಬಿಟ್ಟಿ ಪ್ರಸಾರ ಮಾಡಿದೆ. ಇನ್ನೊಂದು ಕಡೆ ಮಾಧ್ಯಮ ಪ್ರತಿನಿಧಿಗಳು ಪರೀಕ್ಷಾ ಕೊಠಡಿಯೊಳಗೆ ಮತ್ತು ತರಗತಿ, ಶಿಕ್ಷಕರ ಕೊಠಡಿಯೊಳಗೆ ಅಕ್ರಮ ಪ್ರವೇಶಿಸಿ ವಿದ್ಯಾರ್ಥಿಗಳನ್ನು, ಶಿಕ್ಷಕಿಯರನ್ನು ವಿಡಿಯೋ ಚಿತ್ರೀಕರಿಸಿರುವುದು ಕಂಡುಬಂದಿದೆ.

ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ರವಾನಿಸಿದ ಕೆಲ ಮಾಧ್ಯಮಗಳಿಂದ ರಾಜ್ಯದಲ್ಲಿ ಮುಸ್ಲಿಮರು ಆತಂಕದಲ್ಲಿ ಬದುಕುವ ವಾತಾವರಣ ಸೃಷ್ಟಿಸಲಾಗುತ್ತಿದ್ದು ಮಾತ್ರವಲ್ಲದೆ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಉಚ್ಛ ನ್ಯಾಯಾಲಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯದ ಜನರಿಗೆ ನೈಜ ಮತ್ತು ಸ್ಪಷ್ಟ ಮಾಹಿತಿ ತಲುಪಿಸುವ ಕುರಿತು ಕ್ರಮ ವಹಿಸಿ, ಇಂದು ವಿದ್ಯಾರ್ಥಿನಿಯರನ್ನು ಶಿರವಸ್ತ್ರ ಧರಿಸಿದ ಕಾರಣಕ್ಕೆ ತರಗತಿ ಮತ್ತು ಪರೀಕ್ಷೆಗಳಿಗೆ ನಿರ್ಬಂಧಿಸಿದ ಸಂಬಂಧಪಟ್ಟ ಶಾಲಾ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.

error: Content is protected !!

Join the Group

Join WhatsApp Group