(ನ್ಯೂಸ್ ಕಡಬ) newskadaba.com ಮರ್ದಾಳ, ಡಿ. 21. ಮರ್ಧಾಳ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹರೀಶ್ ಕುಮಾರ್ ಕೋಡಂದೂರು ಅವರ ಅಧ್ಯಕ್ಷತೆಯಲ್ಲಿ ಡಿ 20ರಂದು ನಡೆಯಿತು.

ಸಭೆಯ ವರದಿ ಪಿಡಿಓ ಓದುತ್ತಿರುವ ವೇಳೆ ಮಾತನಾಡಿದ ಸದಸ್ಯ ಅಜಯ್ ಅವರು ಈ ಹಿಂದೆ ಕ್ರಿಯಾ ಯೋಜನೆಯನ್ನು ರದ್ದುಪಡಿಸಿ ಹೊಸ ಕ್ರಿಯಾಯೋಜನೆ ತಯಾರಿಸಲು ತಾ.ಪಂಚಾಯತ್ ನಿಂದ ಬಂದ ಪತ್ರದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಚರ್ಚೆ ನಡೆಯಿತು. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನಿರ್ಣಯ ಹಾಗೂ ತಪ್ಪು ಆಗದಂತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷರು ತಿಳಿಸಿದರು. ಬಳಿಕ ಈ ಹಿಂದಿನ ಕ್ರಿಯಾಯೋಜನೆ ರದ್ದು ಮಾಡಿ ಹೊಸ ಕ್ರೀಯಾಯೋಜನೆ ತಯಾರಿಗೆ ಸಭೆ ಕರೆಯುವುದು ಸೂಕ್ತ ಎಂದು ಅಧ್ಯಕ್ಷರು ಸೂಚಿಸಿದಂತೆ ನಿರ್ಣಯ ಕೈಗೊಳ್ಳಲಾಯಿತು.

ಸಿಬ್ಬಂದಿ ನೇಮಕ ಚರ್ಚೆ;
ಗ್ರಾ.ಪಂ.ಗೆ ದಿನಗೂಲಿ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಲಾದ ಬಗ್ಗೆ ಮಾತನಾಡಿದ ಸದಸ್ಯ ಅಜಯ್ ಅವರು, ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ನೇರವಾಗಿ ಆಯ್ಕೆ ಮಾಡುವ ಬದಲು ಪ್ರಕಟಣೆ ಹೊರಡಿಸಿ ಬಳಿಕ ನೇಮಕ ಮಾಡಬಹುದಿತ್ತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವಿದ್ಯಾವಂತ ಅಭ್ಯರ್ಥಿಗಳು ಇದ್ದಾರೆ ಅವರಿಗೂ ಅವಕಾಶ ನೀಡಬೇಕು ಎಂದರು. ಈ ಹಿಂದೆ ಇದ್ದ ಗ್ರಾ.ಪಂ. ಸಿಬ್ಬಂದಿಯವರ ಬದಲಿಗೆ ಹೊಸ ಸಿಬ್ಬಂದಿಯನ್ನು ದಿನಗೂಲಿ ನೆಲೆಯಲ್ಲಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ. ಖಾಲಿ ಇರುವ ಸಿಬ್ಬಂದಿ ನೇಮಕ ಮಾಡುವ ಕುರಿತಂತೆ ಜಿ.ಪಂ.ಗೆ ಮರು ಪ್ರಸ್ತಾವಣೆ ಸಲ್ಲಿಸಲು ನಿರ್ಣಯ ತಗೆದುಕೊಳ್ಳಲಾಯಿತು. ಸ್ವಚ್ಚತಾಗಾರರ ವೇತನ ಹೆಚ್ಚಳಕ್ಕೆ ಹಾಗೂ ದಿನಗೂಲಿ ಸಿಬ್ಬಂದಿ ಅವರ ವೇತನ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆಯಿತು.

ಸೂಕ್ತ ಕ್ರಮ ಅಗತ್ಯ:
ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿಯವರು ಪ್ಲಾಸ್ಟಿಕ್ ಸುಡುವ ಘಟನೆ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಅವರಿಗೆ ಎಚ್ಚರಿಕೆಯ ನೋಟೀಸ್ ನೀಡಿ ಬಳಿಕ ಕಠಿಣ ಕ್ರಮ ತೆಗೆದುಕೊಳ್ಳಲು ಅಗತ್ಯ ಇದೆ ಎಂದು ಅಧ್ಯಕ್ಷರು ಸೂಚಿಸಿದರು. ಸ್ವಚ್ಚತೆ ಬಗ್ಗೆ ಗ್ರಾಮಸ್ಥರು ತಾವಾಗಿಯೇ ಪಾಲನೆ ಮಾಡಬೇಕು. ಸ್ವಚ್ಚತೆ ಕಾಪಾಡಲು ಗ್ರಾ.ಪಂ. ವತಿಯಿಂದ ಕಸ ಸಂಗ್ರಹಕ್ಕೆ ಗೋಣಿ ನೀಡಲಾಗುವುದು ಎಂದು ತೀರ್ಮಾನಿಸಲಾಯಿತು. ನೀರಿನ ಸಮಿತಿ ಮಾಡುವಂತೆ ಹಲವು ಸಮಯಗಳಿಂದ ಸೂಚಿಸಿದ್ದರೂ ಈ ಬಗ್ಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಅಧ್ಯಕ್ಷರು ದೂರಿದರು. ಕುಡಿಯುವ ನೀರಿಗೆ ಸಂಬಂಧಿಸಿದ ವಿಚಾರಗಳ ಚರ್ಚಿಸಲು ಸಮಿತಿ ಅಗತ್ಯವಿದೆ ಆದ್ದರಿಂದ ನೀರಿನ ಸಮಿತಿ ಮಾಡುವಂತೆ ಆಗ್ರಹ ವ್ಯಕ್ತವಾಯಿತು.

ಮನೆ ಮಂಜೂರಾಗಲಿ;
ಹೊಸ ಮನೆ ಕಟ್ಟಲು ಹಲವರು ಅರ್ಜಿ ಸಲ್ಲಿಸಿದರೂ ಮನೆಗಳು ಮಂಜೂರಾಗುತ್ತಿಲ್ಲ. ಮನೆ ಕಟ್ಟುವ ಸಿದ್ಧತೆಯಲ್ಲಿರುವವರ ಪಾಡು ಸಂಕಷ್ಟದಲ್ಲಿದೆ. ಸರಕಾರ ಮನೆ ಮಂಜೂರುಗೊಳಿಸಲು ಮುಂದಾಗಬೇಕು ಎಂದು ಸಭೆಯಲ್ಲಿ ಆಗ್ರಹ ಕೇಳಿಬಂತು.
ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ಬಾರದೇ ಇರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಉತ್ತರಿಸಿದ ಪಿಡಿಒ ಅವರು ಕಳೆದ ಅಕ್ಟೋಬರ್ ನಿಂದ ಅನುದಾನ ಬಂದಿಲ್ಲ. ಇದು ಸರಕಾರದ ಹಂತದಲ್ಲಿ ನಡೆಯಬೇಕಾದ ಕೆಲಸ ಎಂದರು. ಸರಕಾರ ಅನುದಾನ ಶೀಘ್ರ ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ವಿಡಿಯೋ ಚಿತ್ರೀಕರಣ ಮಾಡಿ:
ಸಭೆಯ ಆರಂಭದಲ್ಲಿ ಸದಸ್ಯ ಅಜಯ್ ಅವರು ಸಭೆಯ ವಿಡಿಯೋ ಚಿತ್ರೀಕರಣ ಮಾಡುವಂತೆ ಮನವಿ ಮಾಡಿದರು. ಬಳಿಕ ಸಭೆಯ ವಿಡಿಯೋ ಚಿತ್ರೀಕರಣಕ್ಕೆ ಸೂಚಿಸಲಾಯಿತು ಅದರಂತೆ ಸಭೆ ನಡೆಯಿತು. ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ನಿರ್ಣಯ ಪ್ರತಿ ಎಲ್ಲಾ ಸದಸ್ಯರಿಗೂ ನೀಡಲು ಅವರು ಆಗ್ರಹಿಸಿದರು. ಅದರಂತೆ ಪ್ರತಿ ನೀಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಗಂಗಾಧರ ರೈ, ಪ್ರೇಮ, ಅಜಯ್.ಎಂ. ಮಹಮ್ಮದ್ ಶಾಕಿರ್, ಮೀನಾಕ್ಷಿ ಹಾಗೂ ಯಮುನಾ ಮೊದಲಾದವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪಿಡಿಒ ಶೇಖರ ಅವರು ಸ್ವಾಗತಿಸಿ, ಕಾರ್ಯದರ್ಶಿ ವೆಂಕಟ್ರಮಣ ಗೌಡ ವಂದಿಸಿದರು.







