ಬಾಯಾರಿಕೆಯ ನೆಪವೊಡ್ಡಿ ಮನೆಯೊಳಗೆ ನುಗ್ಗಿ ಸರಗಳ್ಳತನಕ್ಕೆ ಯತ್ನ ➤ ಪೊಲೀಸರಿಗೊಪ್ಪಿಸಿದ ಸ್ಥಳೀಯರು

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 13. ಬಾಯಾರಿಕೆಯಾಗುತ್ತಿದೆ ಎಂದು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದ ಯುವಕನೋರ್ವ ಮನೆಯೊಡತಿಯ ಸರ ಕಳ್ಳತನಕ್ಕೆ ಯತ್ನಿಸಿ, ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ‌.

ಬಂಧಿತನನ್ನು ಕಲಬುರಗಿ ಜಿಲ್ಲೆಯ ಸಿದ್ಧಾಪುರ ಮೂಲದ ಮಾರುತಿ ಎಂದು ಗುರುತಿಸಲಾಗಿದೆ. ಪಾನಮತ್ತನಾಗಿದ್ದ ಈತ ಹನುಮಕ್ಕ ಎಂಬವರು ವಾಸಿಸುತ್ತಿದ್ದ ಬಾಡಿಗೆ ಮನೆಗೆ ಬಂದು ನೀರು ಕೇಳಿದ್ದು, ಮನೆಯೊಡತಿ ನೀರು ತರಲೆಂದು ಒಳ ಹೋದ ತಕ್ಷಣ ಮಾರುತಿ ಮನೆಯೊಳಗೆ ನುಗ್ಗಿ ಆಕೆಯ ಸರ ಕದಿಯಲೆತ್ನಿಸಿದ್ದಾನೆ. ಇದನ್ನು ಕಂಡು ಗಾಬರಿಯಾದ ಹನುಮಕ್ಕ ಬೊಬ್ಬೆ ಹೊಡೆದಿದ್ದಾರೆ. ತಕ್ಷಣವೇ ಅಲ್ಲಿ ಜಮಾಯಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ಸರಿಯಾಗಿ ಬಾರಿಸಿ ಮರಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಪುತ್ತೂರು: ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕ ಮೃತ್ಯು

error: Content is protected !!
Scroll to Top