(ನ್ಯೂಸ್ ಕಡಬ) newskadaba.com ಕಡಬ, ಎ.30. ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವ ಅಕ್ಕಿಗಾಗಿ ಗ್ರಾಮೀಣ ಭಾಗದ ಜನರು ಪರದಾಡಿದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನಡೆದಿದೆ.

ಸರಕಾರದ ಆದೇಶದಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ ವಸ್ತುಗಳ ಖರೀದಿಗೆ ಅವಕಾಶವಿದ್ದರೂ, ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ನೆಟ್ವರ್ಕ್ ಇಲ್ಲದೇ ಇದ್ದುದರಿಂದ ಪಡಿತರ ದೊರೆತಿಲ್ಲ. ಬಿಎಸ್ಎನ್ಎಲ್ ಹಾಗೂ ಏರ್ಟೆಲ್ ನೆಟ್ವರ್ಕ್ ಕಟ್ ಆಗಿದ್ದರಿಂದ ಪಡಿತರ ಪಡೆಯಲು ಬಂದ ಗ್ರಾಹಕರು ಪಡಿತರ ಸಿಗದೆ ಪರದಾಡಿದ್ದಾರೆ. ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳು ಲ್ಯಾಪ್ಟಾಪ್ ಹಿಡಿದುಕೊಂಡು ಗುಡ್ಡಕ್ಕೆ ಹತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಗ್ರಾಮವಾಗಿರುವ ಕೆಂಜಾಳದಲ್ಲಿ ಎದುರಾಗಿರುವ ನೆಟ್ವರ್ಕ್ ಸಮಸ್ಯೆಯನ್ನು ನೀಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.











