ಆಕಿಫ್ ಎಂಬ ಬಾಲಕನ ಕೊಲೆ ಕೃತ್ಯ ಖಂಡಿಸಿ ಜಸ್ಟೀಸ್ ಫಾರ್ ಆಕಿಫ್ ನಾಗರಿಕ ಸಮಿತಿ ಕೆ.ಸಿ.ರೋಡ್ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕೆ.ಸಿ ರೋಡ್, ಎ. 13. ಪಬ್ಜಿ ಗೇಮಿನ ಹೆಸರಿನಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟ ಆಕಿಫ್ ಎಂಬ ಹನ್ನೆರಡು ವರುಷದ ಬಾಲಕನ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಇದರ ಹಿಂದಿರುವ ರಹಸ್ಯವನ್ನು ಭೇದಿಸುವಂತೆ ಆಗ್ರಹಿಸಿ ಜಸ್ಟಿಸ್ ಫಾರ್ ಆಕಿಫ್ ನಾಗರಿಕ ಸಮಿತಿ ಇದರ ವತಿಯಿಂದ ಬೃಹತ್ ಪ್ರತಿಭಟನೆಯು ಕೆ ಸಿ ರೋಡ್ ನಲ್ಲಿ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಸಾಮಾಜಿಕ ಹೋರಾಟಗಾರ ಕಲೀಲ್ ತಲಪಾಡಿಯವರು ಮಾತನಾಡಿ, ಆಕಿಫ್ ಕೊಲೆ ಪ್ರಕರಣದಲ್ಲಿ ನಮಗೆ ಹಲವಾರು ಸಂಶಯಗಳು ಕಾಣುತ್ತಿದ್ದು, ಆಕಿಫ್‌ನ‌ ಮೊಬೈಲ್ ಇಲ್ಲಿಯವರೆಗೆ ಪತ್ತೆಯಾಗದಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ನಂತರ ಯುವ ವಿದ್ಯಾರ್ಥಿ ನಾಯಕರಾದ ಸವಾದ್ ಕಲ್ಲರ್ಪೆ ರವರು ಮಾತನಾಡಿ, ಆಕಿಫ್ ನ ಕೊಲೆಗೆ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರೆಯಬೇಕು. ಉಳ್ಳಾಲ ಪೊಲೀಸರು ಹಲವು ಪ್ರಕರಣಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಈ ವಿಷಯದಲ್ಲಿ ತಾರತಮ್ಯ ಮಾಡಿದರೆ ಉಳ್ಳಾಲ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಮಿಷನರ್ ಕಛೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.

ಸಾಮಾಜಿಕ ಹೋರಾಟಗಾರ ಅಶ್ರಪ್ ಕೆ.ಸಿ ರೋಡ್ ಮಾತನಾಡಿ, ಪೊಲೀಸರು ಈ ಪ್ರಕರಣದಲ್ಲಿ ಸಮಗ್ರವಾಗಿ ತನಿಖೆ ನಡೆಸಿ ಆಕಿಫ್ ನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ಜಸ್ಟೀಸ್ ಫಾರ್ ಆಕೀಫ್ ನಾಗರಿಕ ಸಮಿತಿಯ ಸಂಚಾಲಕ ಆಸಿಫ್, ಇರ್ಷಾದ್ ಅಜ್ಜಿನಡ್ಕ, ಇಬ್ರಾಹಿಂ ಕೋಲಂಗರ, ಝಹೀರ್ ಕೆ.ಸಿ ನಗರ, ಇಬ್ರಾಹಿಂ ಟಿ, ಹಸೈನಾರ್ ಕೊಳಂಗರ, ಇನಾಯತ್ ದೇರಳಕಟ್ಟೆ, ಹಕೀಂ ಕೆ.ಸಿ. ರೋಡ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group