ದೇಶದಲ್ಲಿ ಬೆಲೆಯೇರಿಕೆಯನ್ನು ಸಮರ್ಥಿಸುತ್ತಿರುವ ಅಂಧ ಭಕ್ತರು ➤ ಅಂದ ಭಕ್ತರಿಗೆ ಬೇಕಾದರೆ ಬೇರೆಯೇ ಪೆಟ್ರೋಲ್ ಪಂಪ್ ನಿರ್ಮಿಸಲಿ ➤ ಕಡಬದ ಕಾಂಗ್ರೆಸ್ ಸಭೆಯಲ್ಲಿ ಯು.ಟಿ.ಖಾದರ್ ಲೇವಡಿ

(ನ್ಯೂಸ್ ಕಡಬ) newskadaba.com ಕಡಬ, ಜ.03. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು ಎರಡು ವರ್ಷವಾದರೂ ಜನ ಸಾಮಾನ್ಯರಿಗೆ ಯಾವುದೇ ಸೌಲಭ್ಯ ನೀಡದೆ ಜನರನ್ನು ಬೀದಿಗೆ ತಂದು ನಿಲ್ಲಿಸಿರುವುದೇ ಬಿಜೆಪಿಯ ಕೊಡುಗೆಯಾಗಿದೆ ಎಂದು ಶಾಸಕ ಯು.ಟಿ.ಖಾದರ್ ಲೇವಡಿ ಮಾಡಿದ್ದಾರೆ.

ಭಾನುವಾರದಂದು ಕಡಬ ಒಕ್ಕಲಿಹ ಗೌಡ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇಂದು ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಆದರೆ ಅಂಧ ಭಕ್ತರು ಮಾತ್ರ ಇದನ್ನು ನಿರಾಕರಿಸುತ್ತಾ ದರ ಹೆಚ್ಚಳವಾದರೆ ದೇಶಕ್ಕೆ ಒಳ್ಳೆಯದು ಅಂತ ಹೇಳುತ್ತಿದ್ದಾರೆ. ಅಂಧ ಭಕ್ತರಿಗೆ ಬೇಕಾದರೆ ಬೇರೆಯೇ ಪೆಟ್ರೋಲ್ ಪಂಪ್ ಮಾಡಲಿ. ಆದರೆ ಜನ ಸಾಮಾನ್ಯರಿಗೆ ಮಾತ್ರ ಕಡಿಮೆ ದರದಲ್ಲಿ ಪೆಟ್ರೋಲ್ ಕೊಡಲಿ, ಅಲ್ಲದೆ ಕಾಂಗ್ರೆಸ್ ಸರಕಾರ ಜಾಗ ಇಲ್ಲದವರಿಗೆ 94 ಸಿಯಲ್ಲಿ ಜಾಗ ಮಂಜೂರು ಮಾಡಿದೆ, ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ನೀಡಿದೆ. ಆದರೆ ಬಿಜೆಪಿ ಸರಕಾರ ಇದನ್ನು ಕಡಿತಗೊಳಿಸಿದ್ದು, ಇದು ರಾಜ್ಯದ ಜನತೆಗೆ ಮಾಡಿದ ಅನ್ಯಾಯ ಎಂದು ಹೇಳಿದ ಯು.ಟಿ.ಖಾದರ್, ಇಂದು ಚಿನ್ನದ ದರ ಹೆಚ್ಚಿರುವುದರಿಂದ ನಮ್ಮ ಸಹೋದರಿಯರಿಗೆ ತೊಂದರೆಯಾಗಿದೆ. ಇದು ಬಿಜೆಪಿ ಸರಕಾರದ ಕೊಡುಗೆ ಎಂದು ಲೇವಡಿ ಮಾಡಿದ ಅವರು ಬಿಜೆಪಿಗರು ಭಾವನಾತ್ಮಕ ವಿಷಯವನ್ನು ಮಾತನಾಡಿ ಅಧಿಕಾರ ಪಡೆದುಕೊಂಡು ಜನರಿಗೆ ನಯಾ ಪೈಸೆ ಪ್ರಯೋಜನ ಮಾಡಿಲ್ಲ. ಪ್ರಯೋಜನ ಯಾರಿಗೆಂದರೆ ಅಂಬಾನಿ ಮತ್ತು ಅಧಾನಿಯವರಿಗೆ ಮಾತ್ರ ಆಗಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರ ಹಿಡಿಯಲಿದೆ ಎಂದವರು ಹೇಳಿದರು.

error: Content is protected !!

Join the Group

Join WhatsApp Group