ವಿದ್ಯುತ್ ಸ್ಥಾವರದಲ್ಲಿ ಉದ್ಯೋಗ ಭರವಸೆ ನೀಡಿ ವಂಚನೆ ➤ ಕಿಲಾಡಿ ವಂಚಕ ಪೊಲೀಸ್ ಬಲೆಗೆ



(ನ್ಯೂಸ್ ಕಡಬ) newskadaba.com ಕಾರವಾರ ನ. 21: ಕಾರವಾರದ ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20ಕ್ಕೂ ಹೆಚ್ಚು ಯುವಕರಿಗೆ ವಂಚಿಸಿದ ಪ್ರಮುಖ ಆರೋಪಿ ರಿತೇಶ್ ಪಟ್ವಾಲ್ ಎಂಬಾತನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ರಿತೇಶ್ ಒಂದಿಷ್ಟು ಯುವಕರನ್ನು ಸಂಪರ್ಕಿಸಿ ಕೈಗಾದಲ್ಲಿ ಉತ್ತಮ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ. ತಾನು ಕೂಡ ಅಲ್ಲೇ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತನ್ನ ಗುರುತಿನ ಚೀಟಿ ತೋರಿಸಿ ನಂಬಿಸಿದ್ದಲ್ಲದೆ,  ಕಾರವಾರಕ್ಕೆ ಹೋಗಿ ಬರುವ ನಾಟಕವಾಡುತ್ತಿದ್ದ.





ಸಂಸ್ಥೆಯಲ್ಲಿ ಕಂಪ್ಯೂಟರ್ ಆಧಾರಿತ ಹುದ್ದೆ ಖಾಲಿ ಇರುವುದಾಗಿ ಹೇಳಿಕೊಂಡು, ಉದ್ಯೋಗ ಆಕಾಂಕ್ಷಿಗಳಿಂದ ರೆಸ್ಯೂಮ್ ಪಡೆದು, ನಕಲಿ ನೇಮಕ ಪತ್ರ ತಯಾರಿಸಿ ಉದ್ಯೋಗಾಕಾಂಕ್ಷಿಗಳಿಂದ ತಲಾ 20,000ಕ್ಕೂ ಹೆಚ್ಚು ಹಣ ಪಡೆದಿದ್ದಲ್ಲದೆ ಅವರೆಲ್ಲರನ್ನೂ ಕೈಗಾಕ್ಕೆ ತೆರಳುವಂತೆಯೂ ಸೂಚಿಸಿದ್ದ. ಆದರೆ, ಕೈಗಾದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಒಳಕ್ಕೆ ಬಿಡದೆ, ಅವರ ದಾಖಲೆ ಪರಿಶೀಲಿಸಿದ ಬಳಿಕ ತಾವು ನಕಲಿ ದಾಖಲೆಯಿಂದ ಮೋಸ ಹೋಗಿರುವುದು ತಿಳಿದುಬಂದಿದೆ. ಅಷ್ಟರಲ್ಲೇ ಹಣ ಪೀಕಿಸಿದ್ದ ವಂಚಕ ರಿತೀಶ್ ಪರಾರಿಯಾಗಿದ್ದ. ಈ ಬಗ್ಗೆ ವಂಚನೆಗೊಳಗಾದ ಸತೀಶ್  ಎಂಬುವರು  ದೂರು ನೀಡಿದ್ದು, ಅದರಂತೆ ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.






error: Content is protected !!
Scroll to Top