(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 15. ಇತ್ತೀಚೆಗೆ ಕರಾವಳಿ ಭಾಗಗಳಲ್ಲಿ ಎಗ್ಗಿಲ್ಲದೆ ಅಕ್ರಮ ಗೋಸಾಗಾಟ ನಡೆಯುತ್ತಿದೆ. ದಿನದಿಂದ ದಿನಕ್ಕೆ ಅಕ್ರಮ ಜಾನುವಾರು ಸಾಗಾಟ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದರಂತೆ ಇಂದು ಬೆಳಗ್ಗೆ ಕುಂದಾಪುರದ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಎರಡು ಲಾರಿಗಳಲ್ಲಿ 52 ಕೋಣ ಹಾಗೂ ಎಮ್ಮೆಗಳನ್ನ ಸಾಗಿಸುತ್ತಿದ್ದ 4 ಆರೋಪಿಗನ್ನ ಬಂಧಿಸಿದ್ದಾರೆ.

ಎರಡು ಲಾರಿಗಳಲ್ಲಿ 52 ಕೋಣ, ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಮಂಗಳವಾರ ಬೆಳಗ್ಗೆ ಅಮಾಸೆಬೈಲು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರು ಹೊಸಂಗಡಿ ಚೆಕ್ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಲಾರಿಗಳು ಆ ದಾರಿಯಾಗಿ ಬಂದಿದ್ದವು. ಇಷ್ಟೊಂದು ಕೋಣ,ಎಮ್ಮೆಗಳನ್ನು ಸಾಗಿಸುತ್ತಿರುವ ಬಗ್ಗೆ ಅನುಮಾನ ಮೂಡಿದ್ದು, ದಾಖಲೆಗಳನ್ನು ಕೇಳಿದಾಗ ಆರೋಪಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಹೀಗಾಗಿ ಅವರನ್ನು ಬಂಧಿಸಿ, ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.ವಿಚಾರಣೆ ವೇಳೆ ಆರೋಪಿಗಳು ಈ ಜಾನುವಾರುಗಳನ್ನು ಮಾಂಸಕ್ಕಾಗಿ ಕೊಂಡೊಯ್ಯುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಒಂದು ಲಾರಿಯಲ್ಲಿ 24 ಕೋಣಗಳಿದ್ದರೆ, ಇನ್ನೊಂದು ಲಾರಿಯಲ್ಲಿ 28 ಎಮ್ಮೆಗಳಿದ್ದವು. ಬಂಧಿತರನ್ನು ಹರಿಹರ ಗಂಗನರಸಿ ಗುತ್ತೂರು ಮೆಹಬೂಬ್, ಬೈಲುಹೊಂಗಲ ಕಲ್ಲುಕುಟ್ರಿ ಬೆಳವಡಿ ಬಾಪು ಸಾಹೇಬ್, ದಾವಣಗೆರೆ ಚಿಕ್ಕನಹಳ್ಳಿ ಹೊಸಾ ಬಡಾವಣೆ ಇಮ್ರಾನ್, ಬೆಳಗಾವಿ ಬೈಲುಹೊಂಗಲ ಆಸಿಫ್ ಎಂದು ಗುರುತಿಸಲಾಗಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









