ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಇವರು ಧ್ವಜಾರೋಹಣ ನೆರವೇರಿಸಿ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್, ಸುಭಾಸ್‍ಚಂದ್ರ ಬೋಸ್ ಮುಂತಾದ ಮಹನೀಯರ ತ್ಯಾಗ ಬಲಿದಾನದಿಂದ ನಮಗೆ 73 ವರ್ಷಗಳ ಹಿಂದೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದೆ. ನಮಗೆ ದೊರೆತ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದು ಯುವಜನರು ತಿಳಿದುಕೊಂಡು ತಪ್ಪು ದಾರಿ ಹಿಡಿಯಬಾರದು. ದೇಶದ ಆಸ್ತಿ-ಪಾಸ್ತಿ ಮತ್ತು ಸಂಪನ್ಮೂಲಗಳನ್ನು ರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬ ಪ್ರಜೆಯೂ ಮಾಡಬೇಕು ಎಂದು ಸಮಾದೇಷ್ಟರು ನುಡಿದರು. 74ನೇಯ ಈ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಜೊತೆಗೆ ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಅರಿತು ನಿಭಾಯಿಸಿದಲ್ಲಿ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀ ಗುರುರಾಜ್ ರವರು ಮಾತನಾಡಿ ನಾವು ಇಂದು ಆಚರಿಸುತ್ತಿರುವ ಸಂಭ್ರಮದ ಈ ಸ್ವಾತಂತ್ರ್ಯೋತ್ಸವಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹಿರಿಯರ ಬಲಿದಾನ, ತ್ಯಾಗವೇ ಕಾರಣವಾಗಿದೆ ಮತ್ತು ದೇಶ ಸೇವೆ ಮಾಡುವುದನ್ನು ನಮ್ಮ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ನುಡಿದರು. ಈ ಸಂದರ್ಭದಲ್ಲಿ ಉಪಸಮಾದೇಷ್ಟರಾದ ಶ್ರೀ ರಮೇಶ್ ರವರು 74ನೇ ಸ್ವಾತಂತ್ಯೋತ್ಸವದಂದು ಗೃಹರಕ್ಷಕರಿಗೆಲ್ಲ ಶುಭಾಶಯವನ್ನು ಕೋರಿದರು ಮತ್ತು ಕೋವಿಡ್-19 ಕೋರಿಯರ್ಸ್ ಆಗಿ ದುಡಿದ ಗೃಹರಕ್ಷಕರಿಗೆಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ ಕು. ನಿಧಿಯವರು ಸ್ವಾತಂತ್ರ್ಯೋತ್ಸವದ ಬಗ್ಗೆ ಭಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್., ಗೃಹರಕ್ಷಕ ದಳ ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್‍ಶೆರ್, ಪುತ್ತೂರು ಘಟಕದ ಘಟಕಾಧಿಕಾರಿ ಶ್ರೀ ಅಭಿಮನ್ಯು ರೈ, ಹಿರಿಯ ಗೃಹರಕ್ಷಕರಾದ ಶ್ರೀ ರಮೇಶ್ ಭಂಡಾರಿ, ಶ್ರೀಮತಿ ರಾಜಶ್ರೀ ಮತ್ತು ಗೃಹರಕ್ಷಕ/ಗೃಹರಕ್ಷಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group