‘ವಾರ್ತಾಭಾರತಿ’ ವರದಿಗಾರನ ಬಂಧನ ► ರಾಜಕೀಯ‌ ನೇತಾರರು, ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.09. ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಯೊಬ್ಬನ ಮನೆಗೆ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿಯ ಕುರಿತಂತೆ ವರದಿ ಮಾಡಿದ ಆರೋಪದಲ್ಲಿ ‘ವಾರ್ತಾಭಾರತಿ’ಯ ಬಂಟ್ವಾಳ ತಾಲೂಕಿನ ಮುಖ್ಯ ವರದಿಗಾರನನ್ನು ಯಾವುದೇ ನೋಟಿಸ್ ನೀಡದೆ ಬಂಟ್ವಾಳ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದು, ಪೊಲೀಸರ ಈ ಕ್ರಮದ ವಿರುದ್ಧ ನಾಡಿನ ವಿವಿಧ ಮುಖಂಡರು, ರಾಜಕೀಯ ನಾಯಕರು ತಮ್ಮ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಯಾವುದೇ ನೋಟಿಸನ್ನೂ ನೀಡದೆ ಪೊಲೀಸರು ಪತ್ರಕರ್ತನನ್ನು ಬಂಧಿಸಿದ್ದು, ಇದು ದ.ಕ. ಜಿಲ್ಲಾ ಪೊಲೀಸರ ಸರ್ವಾಧಿಕಾರ ಮನಸ್ಥಿತಿಯನ್ನು ಎತ್ತಿ ಹಿಡಿದಿದೆ ಎಂದು ದ.ಕ. ಜಿಲ್ಲಾ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕಿಡಿಕಾರಿವೆ. ತಮ್ಮ ಮನೆಗೆ ಬಂಟ್ವಾಳ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ದಾಂಧಲೆಗಳನ್ನು ನಡೆಸಿದ್ದಾರೆ ಎಂದು ಕುಟುಂಬಸ್ಥರು ನೀಡಿರುವ ಹೇಳಿಕೆ ಇತ್ತೀಚೆಗೆ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದಕ್ಕೆ ಸಂಬಂಧಿಸಿ ದ.ಕ. ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರು ನೀಡಿರುವ ಸ್ಪಷ್ಟೀಕರಣವನ್ನೂ ‘ವಾರ್ತಾಭಾರತಿ’ ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿತ್ತು.

ಆದರೆ ಇದೀಗ ವರದಿಯನ್ನು ಪ್ರಕಟಿಸಿದ ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕರು ಹಾಗೂ ವರದಿಗಾರನ ಮೇಲೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿದ್ದಾರೆ ಹಾಗೂ ವರದಿಗಾರರನ್ನು ಏಕಾಏಕಿ ಬಂಧಿಸಿ ಸುಮಾರು ಆರು ಗಂಟೆ ವಿಚಾರಣೆ ನೆಪದಲ್ಲಿ ಸತಾಯಿಸಿದ್ದಾರೆ. ಈ ನಡುವೆ ಪೊಲೀಸರು ಯಾವ ಮಾಹಿತಿಯೂ ಇಲ್ಲದೆ ವರದಿಗಾರನನ್ನು ಏಕಾಏಕಿ ಬಂಧಿಸಿದ್ದು, ಇದು ಪತ್ರಿಕಾ ಸ್ವಾತಂತ್ರಕ್ಕೆ ದ.ಕ. ಜಿಲ್ಲಾ ಪೊಲೀಸರು ಒಡ್ಡುತ್ತಿರುವ ಬೆದರಿಕೆಯಾಗಿದೆ ಎಂದು ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ವರದಿಯನ್ನು ಕರಾವಳಿಯ ಹಲವು ಪತ್ರಿಕೆಗಳು ಪ್ರಕಟಿಸಿವೆಯಾದರೂ ಪೊಲೀಸರು ವಾರ್ತಾಭಾರತಿ ಪತ್ರಿಕೆಯನ್ನು ಮಾತ್ರ ಗುರಿಮಾಡಿ ಬೆದರಿಕೆ ಒಡ್ಡುತ್ತಿದ್ದು, ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳ ಒತ್ತಡಗಳು ಇರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

error: Content is protected !!

Join the Group

Join WhatsApp Group