ಬೆಳ್ತಂಗಡಿ ಐದು ಮಂದಿ ಬೈಕ್ ಕಳ್ಳರ ಬಂಧನ ➤ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತು ವಶ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.8:  ಹಲವು ದಿನಗಳಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಐದು ಮಂದಿಯಿಂದ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನಾದ್ಯಂತ ದ್ವಿಚಕ್ರ ವಾಹನಗಳು ಕಳವು ಆಗುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಪಿಎಸ್‌ಐ ನಂದ ಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ಇಳಿದಿತ್ತು. ಗುರುವಾಯನಕೆರೆ ಸಮೀಪದ ಜೈನ್‌ ಪೇಟೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಈ ಸಂದರ್ಭ ಅನುಮಾನಸ್ಪದವಾಗಿ ಎರಡು ಬೈಕಿನಲ್ಲಿ ಬಂದ ಸವಾರರನ್ನು ವಿಚಾರಣೆಗೊಳಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸುರತ್ಕಲ್‌ ಕಾನ ನಿವಾಸಿ ವಿಜಯ ಯಾನೆ ಆಂಜನೇಯ(23), ಮಂಗಳೂರು ಉಳಾಯಿಬೆಟ್ಟು ನಿವಾಸಿ ಪ್ರದೀಪ್‌ ಯಾನೆ ಚೇತನ್‌ ಯಾನೆ ಪ್ರದಿ(27), ಬಂಟ್ವಾಳ ತಾಲೂಕಿನ ಬಾಳೆಪುಣಿ ಪೂಪಾಡಿಕಲ್ಲು ನಿವಾಸಿ ಸುದೀಶ್‌ ಕೆ. ಕೆ ಯಾನೆ ಮುನ್ನ (20), ಬೆಳ್ತಂಗಡಿ ತಾಲೂಕಿನ ಉಜಿರೆ ಕುಂಟಿನಿ ನಿವಾಸಿ ಮೋಹನ ಯಾನೆ ಪುಟ್ಟ (21), ಬೆಳ್ತಂಗಡಿ ತಾಲೂಕಿನ ಉಜಿರೆ ಕುಂಟಿನಿ ನಿವಾಸಿ ನಿತಿನ್‌ ಕುಮಾರ್‌(22) ಬಂಧಿತ ಆರೋಪಿಗಳು.

ಬಂಧಿತರಿಂದ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಎಸ್‌ಡಿಎಂ ಕಲಾಭವನದ ಮುಂಭಾಗದ ಮನೆ, ಮದ್ದಡ್ಕ, ಉಜಿರೆ ಸಾಯಿರಾಂ ಪ್ಲ್ಯಾಟ್‌ ಬಳಿ ಮತ್ತು ಮೂಡಬಿದಿರೆಯಿಂದ ಕಳವು ಮಾಡಲಾದ 4 ಬೈಕ್‌, ಕಳವಿಗೆ ಬಳಸಿದ ಓಮ್ನಿ ಕಾರು ಸೇರಿದಂತೆ ಒಟ್ಟು 3,63,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದ.ಕ.ಜಿಲ್ಲಾಎಸ್‌ಪಿ ಲಕ್ಷ್ಮೀಪ್ರಸಾದ್‌ ನಿರ್ದೇಶನದಂತೆ ಎಡಿಶನಲ್‌ ಎಸ್‌ಪಿ ವಿಕ್ರಂ ಆಮ್ಟೆ ಹಾಗೂ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್‌ ಡಿಸೋಜ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ. ಅವರ ಆದೇಶದಂತೆ ಬೆಳ್ತಂಗಡಿ ಪಿಎಸ್‌ಐ ನಂದ ಕುಮಾರ್‌ ಎಂ.ಎಂ. ನೇತೃತ್ವದಲ್ಲಿ ಪ್ರೊಬೆಶನರಿ ಪಿಎಸ್‌ಐ ಶರತ್‌ ಕುಮಾರ್‌, ಎಎಸ್‌ಐಗಳಾದ ದೇವಪ್ಪ ಎಂ.ಕೆ ಮತ್ತು ಕೆ.ಜೆ. ತಿಲಕ್‌, ಸಿಬ್ಬಂದಿಗಳಾದ ಲಾರೆನ್ಸ್‌ ಪಿ.ಆರ್‌., ಇಬ್ರಾಹಿಂ, ಅಶೋಕ್‌, ಚರಣ್‌ರಾಜ್‌, ವೆಂಕಟೇಶ್‌, ಬಸವರಾಜ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!

Join the Group

Join WhatsApp Group