(ನ್ಯೂಸ್ ಕಡಬ) newskadaba.com ಕಡಬ, ಸೆ.06. ಕಾಡು ಬಿಟ್ಟು ನಾಡಿಗೆ ಬಂದು ಉರುಳಿಗೆ ಸಿಲುಕಿದ್ದ ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ವಾಪಾಸ್ ಕಾಡಿಗೆ ಬಿಡಲಾಯಿತು.
ಪುತ್ತೂರು ತಾಲೂಕಿನ ಮರ್ಧಾಳದ ಬಂಟ್ರ ಗ್ರಾಮದ ಮುಂಡ್ರಾಡಿ ನಿವಾಸಿ ಶ್ರೀನಿವಾಸ್ ರೈ ಎಂಬವರ ಜಮೀನಿನಲ್ಲಿ ಯಾರೋ ಅಪರಿಚಿತರು ಇಟ್ಟಿದ್ದ ಉರುಳಿಗೆ ಚಿರತೆಯೊಂದು ಸಿಕ್ಕಿ ಹಾಕಿಕೊಂಡಿರುವುದು ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಅರಿವಳಿಕೆ ತಜ್ಞರನ್ನು ಸ್ಥಳಕ್ಕೆ ಕರೆಸಿ ಮೂರು ಸುತ್ತಿನ ಚುಚ್ಚುಮದ್ದು ನೀಡಿ ಸುಮಾರು ಒಂದೂವರೆ ಗಂಟೆ ಕಾಲ ಕಾರ್ಯಾಚರಣೆಯ ಮೂಲಕ ಚಿರತೆಯನ್ನು ಬೋನಿಗೆ ಸೇರಿಸಿದರು.
ಕಾರ್ಯಾಚರಣೆಯಲ್ಲಿ ಸುಳ್ಯ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ್, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಪಿಲಿಕುಳದ ವೈದ್ಯಾಧಿಕಾರಿ ವಿಷ್ಣು, ಹಿರಿಯ ವೈಜ್ಞಾನಿಕ ಅಧಿಕಾರಿ ವಿಕ್ರಂ ಲೋಬೋ, ಉರಗ ತಜ್ಞ ಹಾಗೂ ಪ್ರಾಣಿ ಪರಿಪಾಲಕ ದಿನೇಶ್ ಕುಮಾರ್, ಅರಣ್ಯ ಪಾಲಕರಾದ ರವಿಚಂದ್ರ ಪಡುಬೆಟ್ಟು, ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.









