ಉಪ್ಪಿನಂಗಡಿ: ಕೊರೊನಾ ವದಂತಿಗೆ ಅತಂತ್ರವಾದ ಮೃತದೇಹ..! ➤ ಎಸ್ಐ ಈರಯ್ಯರ ಮಧ್ಯ ಪ್ರವೇಶದಿಂದ ಸಮಸ್ಯೆ ಇತ್ಯರ್ಥ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.29. ಮೃತಪಟ್ಟ ವ್ಯಕ್ತಿಗೆ ಜ್ವರ ಇತ್ತು ಎಂಬ ವದಂತಿ ಹಬ್ಬಿದ್ದರಿಂದ ಕೊರೋನಾ ಭಯದಿಂದ ಯಾರೂ ಹತ್ತಿರ ಸುಳಿಯದ ಕಾರಣ ಮೃತದೇಹವು ಅತಂತ್ರವಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಉಪ್ಪಿನಂಗಡಿಯ ಹೊಟೇಲ್ ಒಂದರಲ್ಲಿ ಕಾರ್ಮಿಕರಾಗಿದ್ದ ಉಡುಪಿಯ ವ್ಯಕ್ತಿಯೋರ್ವರು ಬುಧವಾರದಂದು ಕುಸಿದು‌ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಅವರು ಜ್ವರದಿಂದ ಬಳಲುತ್ತಿದ್ದರು ಎಂಬ ವದಂತಿ ಹಬ್ಬಿದ ಕಾರಣ ಕೊರೊನಾ ಭಯದಿಂದಾಗಿ ಎಲ್ಲರೂ ಮೃತದೇಹದ ಬಳಿ ಬರಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಮೃತ ವ್ಯಕ್ತಿಯ ಕುಟುಂಬಿಕರು ಉಪ್ಪಿನಂಗಡಿಗೆ ಆಗಮಿಸಿದ್ದು, ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಪ್ರಯತ್ನ ನಡೆಸಿದರಾದರೂ ಸಾಧ್ಯವಾಗಿರಲಿಲ್ಲ. ಮೃತರ ಮನೆಯವರ ಸಂಕಷ್ಟವನ್ನು ಮನಗಂಡು ಉಪ್ಪಿನಂಗಡಿ ಎಸ್‌‌ಐ ಈರಯ್ಯ ಅವರು, ಖಾಸಗಿ ಆಂಬುಲೆನ್ಸ್‌‌‌ ಚಾಲಕ ನೌಫಾಲ್ ಎಂಬವರ ಮನವೊಲಿಸಿ, ಪೊಲೀಸರಿಗೆ ನೀಡಲಾದ ಪಿಪಿಇ ಉಡುಪನ್ನು ಚಾಲಕನಿಗೆ ತೊಡಿಸಿ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಎಸ್ಐ ಈರಯ್ಯ ಅವರ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.

error: Content is protected !!

Join the Group

Join WhatsApp Group