ಹಿರಿಯ ಪತ್ರಕರ್ತೆ ಸೀತಾಲಕ್ಷ್ಮೀ ಕರ್ಕಿಕೋಡಿ ವಿಧಿವಶ ➤ ಇಂದು ಅಂತಿಮ ವಿಧಿವಿಧಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಉಪ ಸಂಪಾದಕಿ, ಹಿರಿಯ ಲೇಖಕಿ ಸೀತಾಲಕ್ಷ್ಮೀ ಕರ್ಕಿಕೋಡಿ ಕೆಲಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಿರಿಯ ಸಾಹಿತಿ ವಿ.ಗ.ನಾಯಕ ಹಾಗೂ ಶ್ಯಾಮಲಾ ಕರ್ಕಿಕೋಡಿ ದಂಪತಿಯ ಪುತ್ರಿಯಾಗಿರುವ ಸೀತಾಲಕ್ಷ್ಮಿ ಕರ್ಕಿಕೋಡಿಯವರು ಕನ್ನಡ ಪತ್ರಿಕೋದ್ಯಮದಲ್ಲಿ ಮಂಡಿಸಿದ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ ಪಿಹೆಚ್‍ಡಿ ಪದವಿ ಪ್ರದಾನಿಸಿ ಗೌರವಿಸಿತ್ತು.

ಕಳೆದ ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ‌ ಉಪ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಮೃತದೇಹವು ಅತ್ತಾವರ ಕೆಎಂಸಿಯ ಶವಾಗಾರದಲ್ಲಿದ್ದು, ಇಂದು (ಮೇ 14) ಬೆಳಗ್ಗೆ 10.30ರ ಸುಮಾರಿಗೆ ಪಾರ್ಥಿವ ಶರೀರವನ್ನು ಕೊಟ್ಟಾರದ ಅವರ ಮನೆಗೆ ಕೊಂಡೊಯ್ಯಲಾಗುವುದು. ಅಲ್ಲಿ ಅವರ ಅಂತಿಮ ದರ್ಶನದ ಬಳಿಕ ನಂದಿಗುಡ್ಡ ಸ್ಮಶಾನದಲ್ಲಿ ಸುಮಾರು 12 ಗಂಟೆ ವೇಳೆಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Also Read  ಗೃಹಲಕ್ಷ್ಮೀ ಯೋಜನೆಗೆ ಸರ್ವರ್ ಡೌನ್- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,621 ಅರ್ಜಿ ಸಲ್ಲಿಕೆ

error: Content is protected !!
Scroll to Top