ಭಾರತವನ್ನು ಸೇಲ್ ಮಾಡಿ ಜೈಲ್ ಮಾಡಲಾಗುತ್ತಿದೆ: ಸಾಹಿತಿ ದೇವನೂರು ಮಹಾದೇವ



ಬೆಂಗಳೂರು, ಫೆ.22: ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮುಖಾಂತರ ಭಾರತವನ್ನು ಸೇಲ್ ಮಾಡಲಾಗುತ್ತಿದೆ. ಇನ್ನೊಂದೆಡೆ ಸಿಎಎ, ಎನ್‌ಆರ್‌ಸಿಯಂತಹ ಕರಾಳ ಕಾನೂನು ತರುವ ಮುಖಾಂತರ ದೇಶದ ಪೌರರಿಗೆ ಸಂಕಷ್ಟ ತಂದು, ಜೈಲ್ ಮಾಡುವ ತಯಾರಿ ಮಾಡಲಾಗುತ್ತಿದೆ ಎಂದು ಸಾಹಿತಿ ದೇವನೂರು ಮಹಾದೇವ ಆತಂಕ ವ್ಯಕ್ತಪಡಿಸಿದ್ದಾರೆ.





ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್‌ನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಐದನೇ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಸತತವಾಗಿ ಐದು ವರ್ಷಗಳಿಂದ ಭಾರತ್ ಪೆಟ್ರೋಲಿಯಂ ಸಂಸ್ಥೆ ಸರಾಸರಿ 5 ಸಾವಿರ ಕೋಟಿಗಳಿಗೂ ಅಧಿಕ ಲಾಭ ಗಳಿಸುತ್ತ ಬಂದಿದ್ದು, ಇದು ಸರಕಾರಕ್ಕೆ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ತೆರಿಗೆ ರೂಪದಲ್ಲಿ ಐದು ವರ್ಷಗಳಲ್ಲಿ 30 ಸಾವಿರ ಕೋಟಿ ಸಂದಾಯ ಮಾಡಿದೆ. ಆದರೆ, ಈ ಕಂಪನಿಯನ್ನು ಸರಕಾರ ಕೇವಲ 60 ಸಾವಿರ ರೂ. ಕೋಟಿಗೆ ಮಾರಾಟ ಮಾಡುತ್ತಿದೆ ಎಂದು ತಿಳಿಸಿದರು.






ಜಾಗತೀಕರಣ, ಖಾಸಗೀಕರಣ ಬಳಿಕ, ಈಗಿನ ವೃತ್ತಿ ಸಂಘಟನೆಗಳಿಗೆ ಕಾಲಿಗೆ ಸರಪಳಿ ಕಟ್ಟಿದಂತಾಗಿ ನಡೆದಾಡಲೂ ಕಷ್ಟ ಪಡುತ್ತಿವೆ. ಈ ಮೊದಲಿದ್ದ ಟ್ರೇಡ್ ಯೂನಿಯನ್‌ಗಳಿಗೂ, ಈಗಿನ ವೃತ್ತಿ ಸಂಘಟನೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದರು.

1934ರಲ್ಲಿ ಬ್ರಿಟಿಷರು ರೂಪಿಸಿದ ಒಂದು ಕಾನೂನು ಇದೆ. ಅದುವೇ ಆರ್‌ಬಿಐ 45 (ಇ) ಎಂಬ ಕಾಯ್ದೆ. ಬ್ಯಾಂಕುಗಳಿಂದ ಸಾಲ ಪಡೆದ ಬ್ರಿಟಿಷ್ ಅಧಿಕಾರಿಗಳು ಹಣ ಪಾವತಿಸದೆ ಮೋಸ ಮಾಡಿದರೆ, ಅದನ್ನು ರಹಸ್ಯವಾಗಿ ಇಡುವಂತಹ ಕಾಯ್ದೆ ಇದಾಗಿದೆ. ಈ ಕಾನೂನು ಈಗಲೂ ಚಾಲ್ತಿಯಲ್ಲಿದ್ದು, ಕಾರ್ಪೊರೇಟ್ ಕಂಪನಿಗಳು ಈ ಗೌಪ್ಯತೆಯ ಗೌರವಕ್ಕೆ ಪಾತ್ರರಾಗಿದ್ಧಾರೆ ಎಂದರು.

ಆರ್‌ಬಿಐ 45(ಇ) ಕಾಯ್ದೆ ವಿರುದ್ಧ ಸಂಘಟನೆಗಳು ಹೋರಾಡಿದ್ದರೆ, ಇಡೀ ಜನಸಮುದಾಯ ಬ್ಯಾಂಕ್‌ಗಳು ತಮ್ಮವು ಎಂದುಕೊಳ್ಳುತ್ತಿತ್ತು. ಬ್ಯಾಂಕ್‌ಗಳ ಬುಡಕ್ಕೇ ಕೊಡಲಿಯೇಟು ಕೊಡುವಂತಹ ಇಂತಹ ಕಾನೂನಿನ ವಿರುದ್ಧ ಬ್ಯಾಂಕ್ ನೌಕರರ ಸಂಘಟನೆಗಳು ಏಕೆ ಹೋರಾಡಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಹೇಳಿದರು.

error: Content is protected !!
Scroll to Top