ಕಡಬ: ಕಲ್ಲಂತಡ್ಕ ಸರಕಾರಿ ಜಾಗದಲ್ಲಿದ್ದ ಅಕ್ರಮ ಕಟ್ಟಡಗಳ ತೆರವು

(ನ್ಯೂಸ್ ಕಡಬ) newskadaba.com ಕಡಬ, ಜು.19. ಕಡಬ ಗ್ರಾ.ಪಂ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಎಂಬಲ್ಲಿರುವ ಸಾರ್ವಜನಿಕ ಸ್ಮಶಾನದ ಬಳಿಯ ಸರಕಾರಿ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವುದನ್ನು ಕಂದಾಯ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.


ಪುತ್ತೂರು ಸಹಾಯಕ ಆಯುಕ್ತರು ಎಚ್.ಕೆ ಕೃಷ್ಣಮೂರ್ತಿ ಆದೇಶದಂತೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರೀಗಸ್ ಅವರ ನೇತೃತ್ವದ ಕಂದಾಯ ಅಧಿಕಾರಿಗಳ ತಂಡದ ಉಪಸ್ಥಿತಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ ಜನರೇ ಸ್ವಯಂಪ್ರೇರಿತವಾಗಿ ಅಕ್ರಮ ಕಟ್ಟಡ ತೆರವು ಕಾರ್ಯಚರಣೆ ನೇರವೇರಿಸಿದರು. ಈಗಾಗಲೇ ಆಕ್ರಮ ಕಟ್ಟಡ ನಿರ್ಮಿಸಿದವರಿಗೆ ತಕ್ಷಣ ತೆರವುಗೊಳಿಲು ನೋಟಿಸ್ ನೀಡಿದಂತೆ ಗುರುವಾರ ಸ್ಥಳಕ್ಕೆ ತೆರವು ಕಾರ್ಯಕ್ಕೆ ಬೇಟಿ ನೀಡಿದಾಗ ಕಟ್ಟಡ ನಿರ್ಮಿಸಿದವರು ಕೂಡಾ ಹಾಜರಾಗಿದ್ದರು. ಕಂದಾಯ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಕಾರ್ಯಚರಣೆಗೆ ಮುಂದಾಗುವ ಮುನ್ನ ಕೊನೆಯ ಬಾರಿ ಎಂಬಂತೆ ಕಟ್ಟಡ ನಿರ್ಮಿಸಿದವರಿಗೆ ತಾವಗಿಯೇ ತೆರವುಗೊಳಿಸಿದರೆ ಉತ್ತಮ ತಪ್ಪಿದರೆ ಜೆಸಿಬಿಯಲ್ಲಿ ನೆಲಸಮ ಮಾಡುವುದೆಂದು ಎಚ್ಚರಿಸಿದರು. ಕಂದಾಯ ಅಧಿಕಾರಿಗಳ ಸೂಚನೆಗೆ ತಲೆಬಾಗಿದ ಅಕ್ರಮ ಕಟ್ಟಡ ನಿರ್ಮಿಸಿದವರು ಬಳಿಕ ಸ್ವಯಂಪ್ರೇರಿತರಾಗಿ ನಿರ್ಮಾಣ ಆಗಿದ್ದ ಗೋಡೆಗಳ ಕಲ್ಲುಗಳನ್ನು ತೆರವುಗೊಳಿಸಿದರು. ಸ್ಮಶಾನ ಬಳಿಯ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಯಾವುದೇ ಕಟ್ಟಡಗಳು ಇಲ್ಲದಿದ್ದರೂ 94ಸಿ ಯಲ್ಲಿ ಕಾನೂನು ಬಾಹಿರವಾಗಿ ಹಕ್ಕು ಪತ್ರಗಳನ್ನು ನೀಡಲಾಗಿತ್ತು.

ಇನ್ನುಳಿದವರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಲೋಕಾಯುಕ್ತಕ್ಕೆ ಹಾಗೂ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ಗ್ರಾ.ಪಂ ನವರು ನಿರ್ಮಾಣ ಹಂತದಲ್ಲಿದ್ದ ಕಟ್ಟಡಗಳಿಗೆ ತಡೆ ನೀಡಿ ಪೂರಕ ದಾಖಲೆ ನೀಡಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಮುಂದುವರಿಸಬೇಕೆಂದು ತಾಕಿತು ಮಾಡಿತ್ತು, ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿದ್ದ ಪುತ್ತೂರು ಸಹಾಯಕ ಆಯುಕ್ತರು ತಕ್ಷಣ ಅಗತ್ಯ ಕ್ರಮ ಕೈಗೊಂಡು ಕಟ್ಟಡ ತೆರವುಗೊಳಿಸಬೇಕೆಂದು ತಹಶೀಲ್ದಾರರಿಗೆ ಆದೇಶ ನೀಡಿದ್ದರು. ಈ ಮಧ್ಯೆ ಶಾಸಕ ಎಸ್.ಅಂಗಾರ ಸ್ಥಳಕ್ಕೆ ಭೇಟಿ ನೀಡಿ ಸರಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿರುವುದನ್ನು ತಕ್ಷಣ ತೆರವುಗೊಳಿಸಿ ಈ ಜಾಗವನ್ನು ಸರಕಾರಿ ಉದ್ದೇಶಕ್ಕೆ ಬಳಕೆ ಮಾಡಬೇಕೆಂದು ಕಂದಾಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಇಲ್ಲಿ ಒಟ್ಟು 8 ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು 5 ಕಟ್ಟಡಗಳು ಗೋಡೆಯ ಹಂತದಲ್ಲಿದ್ದರೆ 1 ಕಟ್ಟಡಕ್ಕೆ ಅಡಿಪಾಯ ಹಾಕಲಾಗಿತ್ತು. 2 ಕಟ್ಟಡಗಳನ್ನು ಪೂರ್ತಿಗೊಳಿಸಿ ಸೀಟು ಹೊದಿಸಲಾಗಿತ್ತು. ವಿಶೇಷವೆಂದರೆ ಈ ಹಿಂದೆ ಯಾವುದೇ ಮನೆ ಅಥವಾ ಕಟ್ಟಡ ಇಲ್ಲದಿದ್ದರೂ 3 ಜನರಿಗೆ 94ಸಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಈದೀಗ ಗುರುವಾರ ತೆರವು ಕಾರ್ಯಚರಣೆ ಪ್ರಾರಂಭಿಸಿದ ಕಂದಾಯ ಅಧಿಕಾರಿಗಳು 94ಸಿಯಲ್ಲಿ ಹಕ್ಕುಪತ್ರ ವಿತರಿಸಿದ ಜಾಗದಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ಹೊರತು ಪಡಿಸಿ ಉಳಿದೆಲ್ಲವುಗಳನ್ನು ನೆಲಸಮ ಮಾಡಲಾಗಿದೆ. ಕಂದಾಯ ಇಲಾಖೆಯಿಂದ ನೀಡಲಾದ ಹಕ್ಕು ಪತ್ರವನ್ನು ರದ್ದುಗೊಳಿಸಿ ಅವರಿಗೆ ನೋಟೀಸ್ ನೀಡಿ ಬಳಿಕ ಕಟ್ಟಡ ತೆರವು ಮಾಡಲಾಗುವುದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.


ತೆರವು ಕಾರ್ಯಚರಣೆ ವೇಳೆ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರೀಗಸ್, ಕಂದಾಯ ನಿರೀಕ್ಷಕ ಅವೀನ್ ರಂಗತ್ತಮೂಲೆ, ಗ್ರಾಮ ಕರಣಿಕ ಹರೀಶ್ ಹೆಗ್ಡೆ , ಗ್ರಾಮ ಸೇವಕ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group