ರಾಷ್ಟ್ರೀಯ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಇಂದಿನಿಂದ ಆರಂಭ (IDCF)

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ರಾಷ್ಟ್ರೀಯ IDCF  (ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ) ಕಾರ್ಯಕ್ರಮವು ಜೂನ್ 03 ರಿಂದ ಜೂನ್ 17 ರ ತನಕ ಜರುಗಲಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಸಂಖ್ಯೆಯನ್ನು ನಿಯಂತ್ರಿಸಲು ಪ್ರತಿ ವರ್ಷದಂತೆ ಈ ವರ್ಷವು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣರಾವ್ ತಿಳಿಸಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಚೇರಿಯಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳಿರುವ ಎಲ್ಲಾ ಮನೆಗಳಿಗೆ ಆಶಾ/ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಓ.ಆರ್.ಎಸ್ ಪ್ಯಾಕೆಟ್ ವಿತರಣೆ ಮಾಡುವುದು ಮತ್ತು ಓ.ಆರ್.ಎಸ್ ದ್ರಾವಣ ತಯಾರಿಕೆ ಬಗ್ಗೆ ಪ್ರಾತ್ಯಕ್ಷತೆ ನೀಡುವುದು. ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಓ.ಆರ್.ಎಸ್ ಮತ್ತು ಜಿಂಕ್ ಕಾರ್ನರ್ ರಚಿಸಲಾಗಿದೆ.

ಅತಿಸಾರ ಬೇಧಿ ಪ್ರಕರಣದ ಮಕ್ಕಳಿಗೆ ಓ.ಆರ್.ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆಯನ್ನು 14 ದಿನಗಳ ಶುದ್ಧ ಕುಡಿಯುವ ನೀರು ಆಥವಾ ತಾಯಿಯ ಎದೆಹಾಲಿನೊಂದಿಗೆ ಬೆರೆಸಿ ಕುಡಿಸಬೇಕು. ತೀವ್ರ ನಿರ್ಜಲೀಕರಣ ಇರುವ ಪ್ರಕರಣಗಳಿಗೆ ತಾಲೂಕು/ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು. 0-5 ವರ್ಷದೊಳಗಿನ ಮಕ್ಕಳ ಮರಣದಲ್ಲಿ ಶೇಕಡಾ 8% ರಷ್ಟು ಅತಿಸಾರ ಭೇದಿಯಿಂದ ಮರಣವಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಅತಿಸಾರ ಭೇದಿಯಿಂದ ಯಾವುದೇ ಮಕ್ಕಳ ಮರಣ ಸಂಭವಿಸಿಲ್ಲ ಎಂದರು.

ನವಜಾತ ಮತ್ತು ಎಳೆಯ ಮಕ್ಕಳಿಗೆ 6 ತಿಂಗಳ ಒಳಗೆ ಕಡ್ಡಾಯವಾಗಿ ತಾಯಿ ಎದೆ ಹಾಲು ಮಾತ್ರ ನೀಡುವ ಬಗ್ಗೆ ಮನವೊಲಿಸುವುದು ಮತ್ತು 6 ತಿಂಗಳ ನಂತರ ತಾಯಿಯ ಎದೆ ಹಾಲಿನೊಂದಿಗೆ ಪೂರಕ ಆಹಾರ ನೀಡುವ (IYCF – Infant and Young Child Feeding) ಬಗ್ಗೆ ಉತ್ತೇಜಿಸುತ್ತಾರೆ. ಈ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಯ ಸಹಭಾಗಿತ್ವದಲ್ಲಿ ಯಶಸ್ವಿ ಅನುಷ್ಟಾನಗೊಳಿಸಲಾಗುತ್ತಿದೆ.

ವೈಜ್ಞಾನಿಕವಾಗಿ ಕೈತೊಳೆಯುವ ಬಗ್ಗೆ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಿದ್ಯಾರ್ಥಿಗಳಿಗೆ, ಅಡುಗೆಯವರಿಗೆ ಮತ್ತು ಅಂಗನವಾಡಿ ಸಹಾಯಕರಿಯರಿಗೆ ಹಾಗೂ ಮಕ್ಕಳಿಗೆ ಮಾರ್ಗದರ್ಶನವನ್ನು ಆರ್.ಬಿ.ಎಸ್.ಕೆ ತಂಡದಿಂದ ನೀಡಲಾಗುವುದು.ವೈದ್ಯಕೀಯ ಮಹಾವಿದ್ಯಾಲಯಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2690 ಓ.ಆರ್.ಎಸ್ ಮತ್ತು ಜಿಂಕ್ ಕಾರ್ನರ್ ರಚಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಒಟ್ಟು 2101 ಅಂಗನವಾಡಿ ಕಾರ್ಯಕರ್ತೆಯರು, 1354 ಆಶಾ ಕಾರ್ಯಕರ್ತೆಯರು, 310 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, 16 ಆರ್.ಸಿ.ಎಸ್.ಕೆ ತಂಡದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಹಾಗೂ ಈ ಕಾರ್ಯಕ್ರಮದಡಿಯಲ್ಲಿ ಎಲ್ಲಾ ತಾಲೂಕಿಗೆ ನೋಡಲ್ ಅಧಿಕಾರಿಯವರನ್ನು ಮೇಲ್ವಿಚಾರಣೆ ಮಾಡಲು ನೇಮಿಸಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ನವೀನ್ ಚಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಹಾಗೂ ಡಿ.ಎನ್.ಒ. ಡಾ ಲಿಪ್ಸೀ ರವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group