ಕೋಡಿಕಲ್‍ನಲ್ಲಿ ಶಾಲಾ ಪ್ರಾರಂಭೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. ರಜೆಯ ಮಜ ಮುಗಿಸಿ ಬಿಸಿಲಿನ ಧಗೆಯ ನಡುವೆ ಹೊಸ ತರಗತಿಗಳಿಗೆ ಆಗಮಿಸಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಶುಭ ಹಾರೈಸಿ ಸ್ವಾಗತಿಸಿದರು.

ಇಂದು ಕೋಡಿಕಲ್‍ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ‘ಶಾಲೆ ಕಡೆ ನನ್ನ ನಡೆ ಶಾಲೆಗೆ ಮರಳಲು ನನಗೊಂದು ಅವಕಾಶ’ ಎಂಬ ಘೋಷವಾಕ್ಯದಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಆತ್ಮೀಯವಾಗಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು. ತಾವು ಶಾಲೆಗೆ ಹೋಗುತ್ತಿದ್ದ ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿಯನ್ನು ಹೋಲಿಸಿದ ಉಪಾಧ್ಯಕ್ಷರು, ಎಲ್ಲರಿಗೂ ಶಿಕ್ಷಣದ ಹಕ್ಕು ಕಾಯಿದೆ ಜಾರಿಯಿಂದ ಶಿಕ್ಷಣದ ಹಕ್ಕು ಲಭ್ಯವಾಗಿದೆ.

ಜಿಲ್ಲೆಯಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾದದಿಂನಿಂದ ಸಂಪೂರ್ಣ ಶೈಕ್ಷಣಿಕ ವಲಯದ ಚಿತ್ರಣ ಬದಲಾಗಿದೆ. ಜೊತೆಗೆ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಕಲಿತ ಸಾಧಕ ಮಕ್ಕಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಬೆಳೆದ ಮಕ್ಕಳು ಸಮಾಜಮುಖಿಯಾಗಿ, ನಿಸ್ವಾರ್ಥದಿಂದ ಗಟ್ಟಿಗರಾಗುತ್ತಾರೆ ಎಂದು ಅಭಿಪ್ರಾಯಿಸಿದರು. ಶಿಕ್ಷಕರು, ಪೋಷಕರ ಸಹಕಾರದಿಂದ ಆಟದೊಂದಿಗೆ ಪಾಠವನ್ನು ಕಲಿತು ಉತ್ತಮ ಯುವಶಕ್ತಿ ಮೂಡಿಬರಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ವಹಿಸಿ ಮತನಾಡಿ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳೊಂದಿಗಿನ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳು ಜಿಲ್ಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ವಲಯದ ಮಂಜುಳಾ ಅವರು ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ವಿದ್ಯಾಂಗ ಇಲಾಖೆಯ ಉಪನಿರ್ದೇಶಕರಾದ ಶಿವರಾಮಯ್ಯ ಅವರು, ಯಾವೊಂದು ಮಗುವೂ ಶಿಕ್ಷಣದಿಂದವಂಚಿತವಾಗಬಾರದೆಂಬಉದ್ದೇಶದಿಂದ ಶಿಕ್ಷಣ ಇಲಾಖೆ ಶಾಲೆ ಕಡೆ ನನ್ನ ನಡೆ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಜಿಲ್ಲಾ ಉಪಯೋಜನಾ ಸಮನ್ವಯ ಅಧಿಕಾರಿ ಲೋಕೇಶ್ ಸ್ವಾಗತಿಸಿದರು. ಸಿಡಿಪಿಒ ಶ್ಯಾಮಲಾ, ವೆಲೊರೆಡ್ ಸಂಸ್ಥೆಯ ಕಸ್ತೂರಿ, ಎಸ್ ಡಿ ಎಂಸಿಯ ಅಧ್ಯಕ್ಷರಾದ ವೀಣಾ ಶೆಟ್ಟಿ, ಮಹಾಬಲ ಚೌಟ ಪಾಲ್ಗೊಂಡರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.ಇಂದು ಸಾಂಕೇತಿಕವಾಗಿ ಕಾರ್ಯಕ್ರಮದಲ್ಲಿ 8 ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ಪುಸ್ತಕ ಮತ್ತು ಹೂ ನೀಡುವುದರ ಮುಖಾಂತರ ನಡೆಯಿತು. ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವುದರ ಜೊತೆಗೆ ವಿದ್ಯಾರ್ಥಿಗಳು ಶಾಲಾ ಪ್ರವೇಶ ಸಂಭ್ರಮದಲ್ಲಿ ಪಾಲ್ಗೊಂಡರು.

error: Content is protected !!

Join the Group

Join WhatsApp Group