(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.29. ಸುಬ್ರಹ್ಮಣ್ಯ ಮೀಸಲು ಅರಣ್ಯದಲ್ಲಿ ಕಾಲು ಮುರಿದು ಕಳೆದ ಮೂರು ವಾರಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಕಾಡಾನೆಯು ಬುಧವಾರದಂದು ಕೊನೆಯುಸಿರೆಳೆದಿದೆ.

ಸುಬ್ರಹ್ಮಣ್ಯ ಮೀಸಲು ಅರಣ್ಯದ ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ಕಾಡಾನೆಯೊಂದು ಕಳೆದ ಸುಮಾರು 22 ದಿನಗಳಿಂದ ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಅನುಭವಿಸುತ್ತಿತ್ತು. ಸಾರ್ವಜನಿಕರ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯಾಧಿಕಾರಿಗಳು, ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ನೀಡಿಯೂ ಕಾಡಾನೆ ಚೇತರಿಸದೆ ಇದ್ದುದರಿಂದ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಡಿನಲ್ಲಿ ಒಂಟಿಯಾಗಿ ನೋವನ್ನು ಅನುಭವಿಸುತ್ತಿದ್ದ ಗಂಡು ಕಾಡಾನೆಯು ಬುಧವಾರದಂದು ಕೊನೆಯುಸಿರೆಳೆದಿದೆ.













