ಸಚಿವ ಡಿಕೆಶಿ ನಿವಾಸದ ಮೇಲೆ ಐಟಿ ದಾಳಿ ► ಕಡಬ ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.04. ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿರುವುದರ ವಿರುದ್ಧ ಕಡಬ ಬ್ಲಾಕ್ ಕಾಂಗ್ರೇಸ್ ವತಿಯಿಂದ ಶುಕ್ರವಾರದಂದು ಕಡಬ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು. ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿವಾಕರ ಗೌಡ ಶೀರಾಡಿ ಅವರ ನೇತೃತ್ವದಲ್ಲಿ ತಹಶಿಲ್ದಾರ್ ಕಛೇರಿ ಎದುರು ಜಮಾಯಿಸಿದ ಕಾಂಗ್ರೇಸ್ ಕಾರ್ಯಕರ್ತರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಐಟಿ ದಾಳಿಯನ್ನು ತೀವ್ರವಾಗಿ ಖಂಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡರು ಕೇಂದ್ರ ಸರಕಾರದ ಕುಟೀಲ ರಾಜಕೀಯ ನೀತಿ ಹಾಗೂ ಪ್ರಧಾನಿ ಮೋದಿಯ ಹಿಟ್ಲರ್ ವರ್ತನೆಯಿಂದ ದೇಶದಲ್ಲಿ ಸೇಡಿನ ರಾಜಕೀಯ ನಡೆಯುತ್ತಿದೆ, ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದಿರುವ ದಾಳಿ ಇದರ ಒಂದು ಭಾಗವಾಗಿದ್ದು, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು ಉತ್ತಮ ಆಡಳಿತ ನೀಡಿ ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುತ್ತಿರುವ ಕಾಂಗ್ರೇಸ್ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ವಿಶ್ವಾಸ ಗಳಿಸಿದೆ. ಮತ್ತೊಮ್ಮೆ ಇಲ್ಲಿ ಕಾಂಗ್ರೇಸ್ ಆಡಳಿತಕ್ಕೆ ಬರುವುದು ಖಚಿತವಾಗಿದ್ದು ಇದನ್ನು ತಡೆಯಲು ಕೇಂದ್ರ ಸರಕಾರ ನಾನಾ ಕಸರತ್ತುಗಳನ್ನು ಮಾಡುತ್ತಿದೆ, ಕಾಂಗ್ರೇಸ್ ನಾಯಕರ ಮೇಲೆ ಐಟಿ ಅಧಿಕಾರಿಗಳನ್ನು ಛೂಬಿಟ್ಟು ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಆ ಮೂಲಕ ಕಾಂಗ್ರೇಸ್ಗೆ ಮುಜುಗರ ಉಂಟು ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಸಚಿವ ಡಿ.ಕೆ. ಶಿವಕುಮಾರ್ರವರ ಮನೆಯಲ್ಲಿ 2-3 ದಿನಗಳಿಂದ ತನಿಖೆ ನಡೆಸಿದರೂ ಏನೂ ಸಿಕ್ಕಿಲ್ಲ. ಆದರೂ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ.

ಬಿಜೆಪಿಯ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ 500 ಕೋಟಿ ಖರ್ಚು ಮಾಡಿದರೂ ಅದರ ತನಿಖೆ ನಡೆಸಲಾಗುವುದಿಲ್ಲ, ಬಿಜೆಪಿ ಸೇಡಿನ ರಾಜಕೀಯ ನಡೆಸುತ್ತಿದೆ. ಗುಜರಾತಿನ 45 ಶಾಸಕರನ್ನು ಕುದುರೆ ವ್ಯಾಪಾರ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಶಾಸಕರನ್ನು ಕರ್ನಾಟಕಕ್ಕೆ ಕರೆದುಕೊಂಡು ಬರಲಾಗಿದೆ. ಇದನ್ನು ಹತ್ತಿಕ್ಕಲು ಬಿಜೆಪಿ ಷಡ್ಯಂತ್ರ ನಡೆಸಿದ್ದು, ಈಗಾಗಲೇ ಇದನ್ನು ರಾಜ್ಯದ ಜನತೆ ವಿರೋಧಿಸಿದ್ದಾರೆ, ಕಾಂಗ್ರೇಸ್ನ ಗೆಲುವಿನ ನಾಗಲೋಟವನ್ನು ತಡೆಯಲು ಇನ್ನೂ ನೂರು ಮೋದಿಗಳ ಬಂದರೂ ಸಾಧ್ಯವಿಲ್ಲ, ಈ ಬಿಜೆಪಿಯವರು ರಾಜ್ಯವನ್ನು ಏನು ಮಾಡಿದ್ದಾರೆ ಎಂಬುವುದು ನಾಡಿನ ಜನತೆಗೆ ಗೊತ್ತಾಗಿದೆ. ಒಬ್ಬ ಮುಖ್ಯ ಮಂತ್ರಿ ಜೈಲಿಗೆ ಹೋದ ಹೆಗ್ಗಳಿಕೆ ಬಿಜೆಪಿಗೆ ಸಲ್ಲಬೇಕು. ಇವರೊಟ್ಟಿಗೆ 18 ಜನ ಸಚಿವರು ಜೈಲು ಊಟ ಮಾಡಿ ಬಂದಿರುವ ಪರಂಪರೆ ಇರುವ ಬಿಜೆಪಿ ನಾಯಕರು ಎಷ್ಟೆಲ್ಲಾ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದು ಈಗ ಜಗಜಾಹಿರಾಗಿದೆ, ನಮ್ಮ ಊರಿನ ಬಿಜೆಪಿಯ ರಾಜ್ಯ ನಾಯಕಿ ಎಷ್ಟು ಆಸ್ತಿ ಮಾಡಿದ್ದಾರೆ. ನಮ್ಮ ಕ್ಷೇತ್ರದ ಶಾಸಕರು ಎಷ್ಟು ಕಡೆ ಅಕ್ರಮ ಸಂಪತ್ತು ಹೊಂದಿದ್ದಾರೆ, ಅಷ್ಟೇ ಏಕೆ ಸೈಕಲ್ನಲ್ಲಿ ಬರುತ್ತಿದ್ದ ಯಡಿಯೂರಪ್ಪ ಈಗ ಎಷ್ಟು ಕೋಟಿ ಆಸ್ತಿಯ ಒಡೆಯ ಎನ್ನುವುದು ನಮಗೂ ಗೊತ್ತಿದೆ, ಕಾಂಗ್ರೇಸ್ನವರಲ್ಲಿ ಹಣವಿದ್ದರೆ ಅದಕ್ಕೆ ಸೂಕ್ತ ದಾಖಲೆ ಇದೆ. ಬಿಜೆಪಿ ಸೇಡಿನ ರಾಜಕೀಯ ಮಾಡಿದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ಕಾಂಗ್ರೇಸ್ ನಾಯಕರು ಎಚ್ಚರಿಸಿದರು. ಬಳಿಕ ಕಡಬ ತಹಶಿಲ್ದಾರ್ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಅರ್ಪಿಸಿದರು.

ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ|ರಘು ಬೆಳ್ಳಿಪ್ಪಾಡಿ, ಜಿಲ್ಲಾ ಪ್ರಂಚಾಯಿತಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೇಸ್ನ ನಿಕಟಪುರ್ವಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ತಂತ್ರಜ್ಞಾನ ವಿಭಾಗದ ಮಾಜಿ ಅಧ್ಯಕ್ಷ ಯತೀಶ್ ಕುಮಾರ್ ಬಾನಡ್ಕ ಮೊದಲಾದವರು ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ, ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಬಿಳಿನೆಲೆ, ಉಪಾಧ್ಯಕ್ಷೆ ಮೇಫಿ ಚೆರಿಯನ್, ಕಾಂಗ್ರೇಸ್ ಮುಖಂಡರಾದ ಸೈಮನ್ ಸಿ.ಜೆ., ಕೆ.ಎಂ.ಹನೀಫ್, ಅಶ್ರಫ್ ಶೇಡಿಗುಂಡಿ, ಎ.ಎಸ್.ಶರೀಫ್, ಸುಲೈಮಾನ್, ಮನಮೋಹನ ಗೋಳ್ಯಾಡಿ, ಶಶಿಧರ ಬೊಟ್ಟಡ್ಕ, ಗಿರೀಶ್ ಬದನೆ, ರಾಮಕೃಷ್ಣ ಹೊಳ್ಳಾರು, ಪ್ರಸನ್ನ ಕುಮಾರ್ ಕೊಂಬಾರು, ಮ್ಯೊದ್ದೀನ್, ತೋಮಸ್ ಕೆ.ಜೆ, ನೀಲಾವತಿ ಶಿವರಾಮ್, ಸತೀಶ್ ನಾೖಕ್, ಸಾಲಿನಿ ಸತೀಶ್ ನಾೖಕ್, ಕ್ಸೇವಿಯರ್ ಬೇಬಿ, ಟಿ.ಎಂ.ಮ್ಯಾಥ್ಯೂ, ನೀಲಪ್ಪ ಗೌಡ ಬಿಳಿನೆಲೆ, ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!

Join the Group

Join WhatsApp Group