ಚಿಕ್ಕಮಗಳೂರು: 80 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು ➤ ಬೆಳ್ತಂಗಡಿಯ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.19. ಕಾರೊಂದು ಕದಂಕಕ್ಕೆ ಉರುಳಿ ಬಿದ್ದ ಪರಿಣಾಮ ಬೆಳ್ತಂಗಡಿಯ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪ ಸೋಮವಾರದಂದು ಸಂಭವಿಸಿದೆ.

ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲಿಗೂಡು ನಿವಾಸಿಗಳಾದ ವಿಶ್ವನಾಥ್(55) ಪುಷ್ಪಾವತಿ (48) ದಂಪತಿ ಹಾಗೂ ರಾಹುಲ್ ರೈ(58) ಮಮತಾ(51) ದಂಪತಿ ಎಂದು ಗುರುತಿಸಲಾಗಿದೆ. ಸಂಜೀವ್ ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಳಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಕಳಸ ಸಮೀಪದ ಬಾಳೆಹೊಳೆ ಎಂಬಲ್ಲಿ ಯಕ್ಷಗಾನ ನಡೆಯಲಿದ್ದು, ಯಕ್ಷಗಾನ ವೀಕ್ಷಣೆಗೆಂದು ಮೃತರು ತಮ್ಮ ನೂತನ ಮಾರುತಿ ಸುಝುಕಿ ವ್ಯಾಗನಾರ್ ಕಾರಿನಲ್ಲಿ ತೆರಳಿತ್ತಿದ್ದಾಗ ಕೊಟ್ಟಿಗೆ ಹಾರ ಕಳಸ ರಸ್ತೆಯ ಹಿರೇಬೈಲು ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು 80 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕಳಸ ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಟ್ಟು ಕಂದಕದಿಂದ ಮೃತದೇಹಗಳನ್ನು ಮೇಲಕ್ಕೆ ತಂದಿದ್ದಾರೆ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group