(ನ್ಯೂಸ್ ಕಡಬ) newskadaba.com ಕಡಬ, ಜ.13. ಕಡಬ ಜ್ಯೂನಿಯರ್ ಕಾಲೇಜಿನ ಹೊಸ ಕಟ್ಟಡಕ್ಕೆ 1 ಕೋಟಿ ಅನುದಾನ ಮಂಜೂರುಗೊಂಡು ಟೆಂಡರ್ ಮುಗಿದು ಕಾಮಗಾರಿ ಆರಂಭಗೊಳ್ಳದೇ ಇರುವುದರಿಂದ ತಕ್ಷಣ ಕಾಮಗಾರಿ ಪ್ರಾರಂಭಿಸುವಂತೆ ಆದೇಶ ನೀಡಬೇಕೆಂದು ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೆಗೌಡರಿಗೆ ಭಾನುವಾರದಂದು ಮನವಿ ಸಲ್ಲಿಸಲಾಯಿತು.
ಕುಕ್ಕೇ ಸುಬ್ರಹ್ಮಣ್ಯ ಧಾರ್ಮಿಕ ಕ್ಷೇತ್ರವನ್ನು ಸಂದರ್ಶಿಸಿದ ಬಳಿಕ ಮುಖ್ಯಮಂತ್ರಿಗಳ ತುರ್ತು ಕಾರ್ಯಕ್ರಮದ ನಿಮಿತ್ತ ಸುಳ್ಯ ಮೂಲಕ ಮೈಸೂರಿಗೆ ತೆರಳಲು ಕಡಬಕ್ಕೆ ಆಗಮಿಸಿದ ಸಚಿವ ಜಿ.ಟಿ.ದೇವೇಗೌಡರಿಗೆ ಕಡಬದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಭವ್ಯವಾಗಿ ಸ್ವಾಗತಿಸಿದರು. ಕಡಬ ತಾಲೂಕಿನಲ್ಲಿ ಆರು ಜ್ಯೂನಿಯರ್ ಕಾಲೇಜುಗಳಿದ್ದು ತಾಲೂಕಿನಾದ್ಯಂತ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಗಾಗಲೇ ಕಡಬಕ್ಕೆ ಡಿಗ್ರಿ ಕಾಲೇಜೊಂದನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದು, ಕೂಡಲೇ ಮಂಜೂರುಗೊಳಿಸುವಂತೆ ಸಚಿವರಲ್ಲಿ ವಿನಂತಿಸಿಕೊಳ್ಳಲಾಯಿತು. ಮನವಿಗೆ ಸ್ಪಂದಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರವರು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.