ಮಂಗಳೂರು: ಯುವತಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ನ.28. ನಗರದ ಹೊರವಲಯದ ತೋಟ ಬೆಂಗ್ರೆಯಲ್ಲಿ ವಿಹಾರಕ್ಕೆಂದು ತೆರಳಿದ್ದ ಯುವತಿಯೋರ್ವಳನ್ನು ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಹಾಡುಹಗಲೇ ಸಾಮೂಹಿಕ ಅತ್ಯಾಚಾರಗೈದ ಪೈಶಾಚಿಕ ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪಣಂಬೂರು ಇನ್ ಪೆಕ್ಟರ್ ರಫೀಕ್ ಕೆ.ಎಂ ಮತ್ತು ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹ ದಳದ ವಿಶೇಷ ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳನ್ನು ಬೆಂಗ್ರೆ ನಿವಾಸಿಗಳಾದ ಅಮರನಾಥ ಎಂಬವರ ಪುತ್ರ ಪ್ರಜ್ವಲ್ ಸುವರ್ಣ(25), ಸುರೇಂದ್ರ ಶ್ರೀಯಾನ್ ಎಂಬವರ ಪುತ್ರ ಅರುಣ್ ಅಮೀನ್(26), ಚಂದ್ರಶೇಖರ ಸಾಲಿಯಾನ್ ಎಂಬವರ ಪುತ್ರ ಆದಿತ್ಯ ಸಾಲಿಯಾನ್(25) ಹಾಗೂ ಮೊಹಮ್ಮದ್ ಚಯ್ಯ ಎಂಬವರ ಪುತ್ರ ಅಬ್ದುಲ್ ರಿಯಾಝ್(35) ಎಂದು ಗುರುತಿಸಲಾಗಿದೆ. ನಗರದ ಕಾರ್ಖಾನೆಯೊಂದರಲ್ಲಿ ಉದ್ಯೋಗದಲ್ಲಿದ್ದ ಯುವತಿಯೋರ್ವಳು ನವೆಂಬರ್ 18 ರಂದು ಮಧ್ಯಾಹ್ನದ ವೇಳೆಗೆ ವಿಹಾರಕ್ಕೆಂದು ತನ್ನ ಸ್ನೇಹಿತನೊಂದಿಗೆ ತೋಟ ಬೆಂಗರೆಯ ಅಳಿವೆ ಬಾಗಿಲು ಬೀಚ್‌ಗೆ ತೆರಳಿದ್ದಳೆನ್ನಲಾಗಿದ್ದು, ಈ ವೇಳೆ ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅವರಿಬ್ಬರನ್ನು ಬೆದರಿಸಿದ್ದಲ್ಲದೆ ಯುವಕನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ತನ್ನ ಮೇಲೆ ಏಳು ಮಂದಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

Also Read  ಬ್ರಹ್ಮಾವರ :ಸೊಸೈಟಿ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆಗೆ ಶರಣು

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಟಿ.ಆರ್. ಸುರೇಶ್ ರವರ ನಿರ್ದೇಶನದಲ್ಲಿ, ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರುಗಳಾದ ಹನುಮಂತರಾಯ (ಕಾನೂನು ಸುವ್ಯವಸ್ಥೆ) ಮತ್ತು ಉಮಾ ಪ್ರಶಾಂತ್ (ಅಪರಾಧ ಮತ್ತು ಸಂಚಾರ) ಇವರ ಮಾರ್ಗದರ್ಶನದಲ್ಲಿ ಮಂಗಳೂರು ಸಂಚಾರ ಉಪ-ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಮಂಜುನಾಥ ಶೆಟ್ಟಿಯವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್., ಮಂಗಳೂರು ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಶ್ರೀಮತಿ ಕಲಾವತಿ, ಪಣಂಬೂರು ಠಾಣಾ ಪಿಎಸ್ಐ ಉಮೇಶ್ ಕುಮಾರ್ ಎಂ.ಎನ್. ಹಾಗೂ ಮಂಗಳೂರು ನಗರ ಉತ್ತರ ಉಪ-ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಮೊಹಮ್ಮದ್, ಕುಶಲ ಮಣಿಯಾಣಿ, ವಿಜಯ ಕಾಂಚನ್, ಸತೀಶ್ ಎಂ., ಶರಣ್ ಕಾಳಿ ಮತ್ತು ಪಣಂಬೂರು ಪೊಲೀಸ್ ಠಾಣಾ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

Also Read  ಪುತ್ತೂರು: ವಾಹನ ಶೋ ರೂಮ್ ಒಳಗೆ ನುಗ್ಗಿ ಮಾಜಿ ನೌಕರನಿಂದ ದಾಂದಲೆ ➤ ಪಿಎಫ್‍ಗಾಗಿ ನಡೆಯಿತು ನೂಕಾಟ- ತಲ್ಲಾಟ

error: Content is protected !!
Scroll to Top