ಪಂಬೆತ್ತಾಡಿ ಕೃಷಿಕನ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಬಂಧನ..?? ► ಮನೆಯ ಮುಂಭಾಗದ ಪ್ಲಾಸ್ಟಿಕ್ ಟರ್ಪಾಲ್ ನೀಡಿತು ಮಹತ್ವದ ಸುಳಿವು..!!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.11. ಎರಡು ದಿನಗಳ ಹಿಂದೆ ತನ್ನ ಮನೆಯಲ್ಲೇ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪಂಬೆತ್ತಾಡಿ ಗ್ರಾಮದ ಕಲ್ಚಾರು ಸುಬ್ರಹ್ಮಣ್ಯ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಣಿಯೂರಿನ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸೆಪ್ಟೆಂಬರ್ 08 ರಂದು ಸುಬ್ರಹ್ಮಣ್ಯ ಭಟ್ ರವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಒಬ್ಬಂಟಿಯಾಗಿ ಬದುಕುತ್ತಿದ್ದ ಅವರು ಕೃಷಿ ಮೂಲದಿಂದ ಬದುಕುತ್ತಿದ್ದರೆನ್ನಲಾಗಿದೆ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸ್ ತಂಡಕ್ಕೆ ಮನೆಯ ಮುಂಭಾಗದಲ್ಲಿ ಹಾಸಿದ್ದಂತಹ ಪ್ಲಾಸ್ಟಿಕ್ ಟರ್ಪಾಲ್ ಕಣ್ಣಿಗೆ ಕಂಡಿದೆ. ಅದರ ಮೇಲೆ ಪಿಕಪ್ ವಾಹನವೊಂದು ಹಾದು ಹೋದ ಕುರುಹನ್ನೇ ಕೇಂದ್ರೀಕರಿಸಿದ ತನಿಖಾಧಿಕಾರಿಗಳು ಮನೆಯಲ್ಲಿನ ಕೃಷಿ ಉತ್ಪನ್ನಗಳ ಮೇಲೆ ಗಮನ ಹರಿಸಿದ್ದಾರೆ. ಮನೆಯಲ್ಲಿ ಅಡಿಕೆ‌ ಸಿಪ್ಪೆ ಮಾತ್ರ ಕಂಡುಬಂದಿದ್ದು, ಆದರೆ ಸುಳಿದ ಅಡಿಕೆ ಇರಲಿಲ್ಲ.

ಪ್ರಕರಣಕ್ಕೆ‌ ಸಂಬಂಧಿಸಿ ಅಡಿಕೆ ಸುಳಿಯಲು ಬಂದಿದ್ದ ಕಾಣಿಯೂರು ಮೂಲದ ಇಬ್ಬರನ್ನು ವಶಕ್ಕೆ ಪಡೆದುಕೊಂಡ ಪೊಲೀಸರಿಗೆ ಪ್ರಕರಣದ ಸಂಪೂರ್ಣ ಮಾಹಿತಿ ದೊರೆತಿದ್ದು, ಅವರು ನೀಡಿದ ಮಾಹಿತಿಯಂತೆ ಪಿಕಪ್ ಚಾಲಕ ಹಾಗೂ ಅಡಿಕೆಯನ್ನು ಖರೀದಿಸಿದ ಅಂಗಡಿ ಮಾಲಕ ಸೇರಿದಂತೆ ನಾಲ್ವರು ಇದೀಗ ಪೊಲೀಸ್ ಬಲೆಯಲ್ಲಿ ಸಿಲುಕಿದ್ದಾರೆ. ಒಟ್ಟಿನಲ್ಲಿ ಅಡಿಕೆ ಕಳವು ಮಾಡುವ ಉದ್ದೇಶದಿಂದ ಕೃಷಿಕನನ್ನು ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿದೆಯಾದರೂ, ಅಧಿಕೃತ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಇನ್ನಷ್ಟೇ ದೃಢಪಡಿಸಬೇಕಿದೆ.

error: Content is protected !!

Join the Group

Join WhatsApp Group