ಮರ್ಧಾಳ: ಕಂಠಪೂರ್ತಿ ಮದ್ಯಪಾನಿಯಿಂದ ಸಾಹಸಮಯ ವಾಹನ ಸವಾರಿ ► ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಬಾರಿ ರಸ್ತೆಗೆ ಬಿದ್ದ ಸವಾರ ► ಸಾರ್ವಜನಿಕರಿಗೆ ಪುಕ್ಕಟೆ ಮನೋರಂಜನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.08. ವಿಪರೀತ ಮದ್ಯ ಸೇವಿಸಿದ್ದ ಯುವಕನೋರ್ವ ದ್ವಿಚಕ್ರ ವಾಹನ ಚಲಾಯಿಸಿ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ಘಟನೆ ಇಲ್ಲಿನ ಮರ್ಧಾಳ ಸಮೀಪದ ಕೋಲಂತಾಡಿ ಎಂಬಲ್ಲಿ ಶನಿವಾರದಂದು ನಡೆದಿದೆ.

ಮರ್ಧಾಳದ ಚಾಕೋಟೆಕೆರೆಯಲ್ಲಿನ ಬಾರೊಂದರಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿದ ನೆಟ್ಟಣದ ಶ್ರೀನಿವಾಸ್ ಎಂಬಾತ ತನ್ನ ಹೋಂಡಾ ಡಿಯೋ ವಾಹನವನ್ನು ಚಲಾಯಿಸಲೆತ್ನಿಸಿ ರಸ್ತೆಗೆ ಬಿದ್ದಿದ್ದಾನೆ. ಸ್ಥಳದಲ್ಲಿದ್ದವರು ವಾಹನವನ್ನು ಎತ್ತಿಕೊಟ್ಟು ಈತನನ್ನು ಮೇಲೆತ್ತಿದರಾದರೂ ಎರಡನೇ ಸಲವೂ ವಾಹನ ಚಲಾಯಿಸಲು ವಿಫಲನಾಗಿ ರಸ್ತೆಗೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ತದನಂತರ ಹೊರಡಲನುವಾದ ಈತನನ್ನು ಊರವರು ತೆರಳದಂತೆ ತಡೆದರಾದರೂ ಸ್ಥಳೀಯರ ಮಾತನ್ನು ಮೀರಿ ಎರ್ರಾಬಿರ್ರಿಯಾಗಿ ವಾಹನ ಚಲಾಯಿಸಿ ಕಷ್ಟಪಟ್ಟು ಮರ್ಧಾಳ ಜಂಕ್ಷನ್ ಗೆ ತಲುಪಿದ್ದಾನೆ. ಅಲ್ಲೂ ಎದ್ದೆನೋ ಬಿದ್ದೆನೋ ಎನ್ನುವಂತೆ ವಾಹನ ಚಲಾಯಿಸಿದ ಈತ ಆಟೋವೊಂದಕ್ಕೆ ಢಿಕ್ಕಿ ಹೊಡೆಯುವುದು ಕೂದಳೆಲೆಯ ಅಂತರದಲ್ಲಿ ತಪ್ಪಿದೆ.

ನೆಟ್ಟಣ ಕಡೆಗೆ ತೆರಳಬೇಕಾಗಿದ್ದ ಈತ ಕುಡಿತದ ಮಸ್ತಿನಲ್ಲಿ ಕಡಬ ರಸ್ತೆಯಲ್ಲಿ ಸಂಚರಿಸಿ ಬೊಳ್ಳೂರು ಕಡೆಗೆ ತೆರಳಿದ್ದಾನೆ. ಕೊನೆಗೂ ಕೋಲಂತಾಡಿ ಸಮೀಪ ರಸ್ತೆಗೆಸೆಯಲ್ಪಟ್ಟು ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಬಾರಿ ರಸ್ತೆಗೆಸೆಯಲ್ಪಟ್ಟು ಗಂಭೀರ ಸ್ಥಿತಿಯಲ್ಲಿದ್ದ ಈತನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಸಾಹಸಮಯ ವಾಹನ ಸವಾರಿಯಿಂದಾಗಿ ಸಾರ್ವಜನಿಕರಿಗೆ ಪುಕ್ಕಟೆ ಮನೋರಂಜನೆ ದೊರಕಿತ್ತು.

error: Content is protected !!

Join the Group

Join WhatsApp Group