(ನ್ಯೂಸ್ ಕಡಬ) newskadaba.com,ಕಡಬ.ಜೂ.12. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮೇಶ್ ಕಲ್ಪುರೆ ಅವರ ಅಧಿಕಾರ ಸ್ವೀಕಾರ ಸಮಾರಂಭ ಸಂಘದ ಸಭಾಂಗಣದಲ್ಲಿ ಬುಧವಾರ ನಡೆಯಿತು..
ಅಧಿಕಾರ ಸ್ವೀಕರಿಸಿದ ಅಧ್ಯಕ್ಷರು ಮಾತನಾಡಿ ಸಂಘವು 8 ಗ್ರಾಮಗಳ ವ್ಯಾಪ್ತಿಯಲ್ಲಿ 3 ಶಾಖೆಗಳೊಂದಿಗೆ ಕಾರ್ಯಚರಿಸುತ್ತಿದ್ದು, ಸುಮಾರು 8 ಸಾವಿರ ಸದಸ್ಯರನ್ನು ಹೊಂದಿದೆ, ಸಂಘವು ಆಡಳಿತ ಮಂಡಳಿ, ಸಿಬಂದಿ ವರ್ಗ ಹಾಗೂ ಸದಸ್ಯರ ಸಹಕಾರದಿಂದ ಸುಮಾರು 2 ಕೋಟಿ ರೂ. ಲಾಭವನ್ನು ಹೊಂದುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ಮುನ್ನಡೆಸಲು ಮಹತ್ತರವಾದ ಜವಾಬ್ದಾರಿ ನನ್ನ ಮೇಲೆ ಇದೆ, ನನ್ನೊಂದಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ನಿಗ್ರ್ಪಮನ ಅಧ್ಯಕ್ಷ ಸುಂದರ ಗೌಡ ಮಂಡೆಕರ ಮಾತನಾಡಿ ತನ್ನ ಅವಧಿಯಲ್ಲಿ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ನೂತನ ಅಧ್ಯಕ್ಷರಿಗೂ ನಮ್ಮೆಲ್ಲರ ಸಹಕಾರ ಇದೆ ಎಂದರು.
ಸಂಘದ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸೀತಾರಾಮ ಗೌಡ ಪೊಸವಳಿಕೆ, ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೆ, ಬಿಜೆಪಿ ಮುಖಂಡರಾದ ಸತೀಶ್ ನಾಯಕ್, ಆದಂ ಕುಂಡೋಳಿ ಮಾತನಾಡಿ ಶುಭಹಾರೈಸಿದರು. ಸಂಘದ ನಿರ್ದೇಶಕರಾದ ರಘುಚಂದ್ರ ಗೌಡ ಮನೆಜಾಲು, ಸುದರ್ಶನ ಗೌಡ ಕೋಡಿಂಬಾಳ, ಪೂವಪ್ಪ ಗೌಡ ಐತ್ತೂರು, ನಿತ್ಯಾನಂದ ಗೌಡ ಬೊಳ್ಳಾಜೆ, ಲೀಲಾವತಿ ಅಮ್ಮು ಶೆಟ್ಟಿ, ರಾಜೀವಿ, ಎಪಿಎಂಸಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಮರ್ದಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪುತ್ತಿಲ, ಸದಸ್ಯ ದಾಮೋದರ ಗೌಡ ಡೆಪ್ಪುಣಿ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಗೌಡ ಜಾಲು, ಪ್ರಮುಖರಾದ ಮೋನಪ್ಪ ಗೌಡ ಪುತ್ತಿಲ, ಅಮರನಾಥ ಶೆಟ್ಟಿ ಕುಂಜತ್ತೋಡಿ, ಗೋವಿಂದ ಭಟ್ ಖಂಡಿಗ ಮೊದಲಾದವರು ಉಪಸ್ಥಿತರಿದ್ದರು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಅಧಿಕಾರಿ ಶಿವಲಿಂಗಯ್ಯ ಚುನಾಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾಕೋ ಕೆ.ಎಂ. ಅವರು ಸ್ವಾಗತಿಸಿದರು.
ಉಪಾಧ್ಯಕ್ಷರಾಗಿ ರಘುಚಂದ್ರ ಗೌಡ ಆಯ್ಕೆ:
ಸಂಘದ ಉಪಾಧ್ಯಕ್ಷರಾಗಿದ್ದ ರಮೇಶ್ ಕಲ್ಪುರೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಳಿಕ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ದೇಶಕ ರಘುಚಂದ್ರ ಗೌಡ ಮನೆಜಾಲು ಅವರನ್ನು ಆಯ್ಕೆ ಮಾಡಲಾಗಿದೆ. ಸಹಕಾರ ಭಾರತಿ ಮತ್ತು ಬಿಜೆಪಿ ಪ್ರಮುಖರ ಸಭೆಯಲ್ಲಿ ಆಯ್ಕೆ ನಡೆದಿದ್ದು, ಸಹಕಾರಿ ಕಾಯಿದೆಯ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಸಿ ಈ ಆಯ್ಕೆಯನ್ನು ಘೋಷಣೆ ಮಾಡಬೇಕಿದೆ.









