(ನ್ಯೂಸ್ ಕಡಬ) newskadaba.com ಆ. 24. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸಂಚಾರಿ ಉದ್ಯೋಗ ನೋಂದಣಿ, ವೃತ್ತಿ ಮಾರ್ಗದರ್ಶನ ಮತ್ತು ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೋಮವಾರ ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ (ಪ್ರಭಾರ) ಅರುಣ್ ಕುಮಾರ್ ಹಿಪ್ಪರಗಿ ಮಾತನಾಡಿ, ಪದವಿ ನಂತರ ಯುವಜನತೆಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ಒದಗಿಸಿದರು. ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ, ಐ.ಬಿ.ಪಿ.ಎಸ್, ಎಸ್.ಎಸ್.ಸಿ, ರೈಲ್ವೇ, ಕೆ.ಪಿ.ಎಸ್.ಸಿ, ಕೆ.ಇ.ಎ ಸೇರಿದಂತೆ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸರ್ಕಾರಿ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಖಾಸಗಿ ವಲಯದಲ್ಲಿ ಐ.ಟಿ, ಹಣಕಾಸು, ಶಿಕ್ಷಣ, ಬ್ಯಾಂಕಿಂಗ್, ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಸಹ ಪದವೀಧರಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಇದಕ್ಕಾಗಿ ಯುವಜನತೆ ಉತ್ತಮ ಸಂವಹನ ಹಾಗೂ ಡಿಜಿಟಲ್ ಕೌಶಲ್ಯದೊಂದಿಗೆ ವೃತ್ತಿಪರ ಪ್ರಮಾಣಪತ್ರ ಪಡೆದುಕೊಂಡು ಉದ್ಯೋಗ ಕ್ಷೇತ್ರದಲ್ಲಿ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಆಯೋಜಿಸಲಾಗುತ್ತಿರುವ ಖಾಸಗಿ ಕಂಪೆನಿಗಳ ನೇರ ಸಂದರ್ಶನ ಕಾರ್ಯಕ್ರಮಗಳಲ್ಲಿ ಯುವಜನತೆ ಪಾಲ್ಗೊಳ್ಳಬಹುದು. ನೇರ ಸಂದರ್ಶನಗಳಲ್ಲಿ ಹಲವು ಕ್ಷೇತ್ರಗಳ ವಿವಿಧ ಕಂಪೆನಿಗಳು ಭಾಗವಹಿಸಿ ತಮ್ಮಲ್ಲಿರುವ ಉದ್ಯೋಗಾವಕಾಶಗಳಿಗೆ ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ಯುವಜನತೆ ತಮ್ಮ ಕೌಶಲ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಉಚಿತವಾಗಿ ಅನೇಕ ಉಚಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಯುವಜನತೆಗೆ ಲಭ್ಯವಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಅವರು ತಿಳಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಬಗ್ಗೆ ಅವರು ಮಾಹಿತಿ ನೀಡಿದರು. ನಿರುದ್ಯೋಗಿ ಯುವಜನರಿಗೆ ಆರ್ಥಿಕ ಮತ್ತು ವೃತ್ತಿಪರ ನೆರವು ಒದಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆಯ ಸೌಲಭ್ಯಗಳು, ಅರ್ಹತಾ ಮಾನದಂಡಗಳು, ನೋಂದಣಿ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ಗೀತಾ ಎಂ.ಎಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಿಬ್ಬಂದಿಗಳಾದ ಮಂಜೂಷಾ ಪಿ, ಬಿಂದುಶ್ರೀ ಹಾಗೂ ಕಾಲೇಜಿನ ಸಿಬ್ಬಂದಿಗಳಾದ ಮಮತಾ ಯು, ಜ್ಯೋತಿ ಶೆಟ್ಟಿ ಎಸ್., ಪ್ರಮೀಳಾ, ಡಾ. ಸಂತೋಷ್ ಪಿಂಟೋ, ಡಾ.ತೆರೆಸ್ ಪಿರೇರಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












