ದುಡ್ಡಿದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲವೂ ನಡೆಯುತ್ತೆ ►ಜೈಲು ಅಧಿಕಾರಿಣಿಯಿಂದ 2 ಕೋಟಿ ರೂ.ಗಳ ಭ್ರಷ್ಟಾಚಾರ ಬಯಲಿಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.13. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡಿನ ಶಶಿಕಲಾ ನಟರಾಜನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸವಲತ್ತುಗಳನ್ನು ಪಡೆಯಲು ಜೈಲಧಿಕಾರಿಗಳಿಗೆ 2 ಕೋಟಿ ರುಪಾಯಿ ಲಂಚ ನೀಡಿದ್ದಾರೆಂದು ಕಾರಾಗೃಹ ಇಲಾಖೆಯ ಡಿಐಜಿಯಾಗಿರುವ ದಿಟ್ಟ ಐಪಿಎಸ್ ಆಫೀಸರ್ ರೂಪಾ ಡಿ. ಅವರು ಕಾರಾಗೃಹದ ಡಿಐಜಿಗೆ ಪತ್ರ ಬರೆದು ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ.

ಶಶಿಕಲಾ ನಟರಾಜನ್ ಅವರು ಏನೆಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಯಾರ್ಯಾರಿಗೆ ಲಂಚ ನೀಡಿದ್ದಾರೆ ಎಂದು ವಿವರಿಸಿ, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ 4 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಶಶಿಕಲಾ ನಟರಾಜನ್ ಅವರಿಗಾಗಿಯೇ ವಿಶೇಷ ಅಡುಗೆಮನೆಯನ್ನು ಕಾನೂನು ಬಾಹಿರವಾಗಿ ರೂಪಿಸಲಾಗಿದೆ. ಇದಕ್ಕಾಗಿ 2 ಕೋಟಿ ರುಪಾಯಿ ಲಂಚ ನಿಮಗೆ ನೀಡಲಾಗಿದೆ ಎಂಬ ಆರೋಪವಿದೆ ಎಂದು ಡಿಐಜಿ ಎಚ್.ಎನ್. ಸತ್ಯನಾರಾಯಣ ರಾವ್ ಅವರಿಗೆ ಬರೆದಿರುವ ಪತ್ರದಲ್ಲಿ ರೂಪಾ ಅವರು ಆರೋಪಿಸಿದ್ದಾರೆ. ಈ ಪತ್ರ ಬಹಿರಂಗವಾಗುವುದರೊಂದಿಗೆ ಜೈಲಧಿಕಾರಿಗಳ ನಡುವಿನ ಆಂತರಿಕ ಕಚ್ಚಾಟಗಳು ಕೂಡ ಬಹಿರಂಗವಾಗಿವೆ.

ಅಕ್ರಮ ಆಸ್ತಿ ಗಳಿಕೆ ಕೇಸ್ ನಲ್ಲಿ ಸಜೆ ಅನುಭವಿಸುತ್ತಿರುವ ಶಶಿಕಲಾಗೆಂದೇ ವಿಶೇಷವಾಗಿ ಅಡುಗೆ ಕೋಣೆ ಕಲ್ಪಿಸಲಾಗಿದ್ದು, ಕಾರಾಗೃಹ ಕಾಯ್ದೆ ಹಾಗು ನಿಯಮಗಳ ಉಲ್ಲಂಘನೆಯಾಗಿದೆ. ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದರೂ ಮುಂದುವರಿಸಲಾಗಿದೆ. ಈ ಕಾರ್ಯಕ್ಕೆ 2 ಕೋಟಿ ರು. ಲಂಚ ಕೊಡಲಾಗಿದೆ ಎಂಬ ಮಾತಿದ್ದು, ಈ ಆರೋಪಗಳು ದುರಾದೃಷ್ಟಕರವಾಗಿ ತಮ್ಮ ಮೇಲೆ ಇರುವುದರಿಂದ, ತಾವು ಇದರ ಬಗ್ಗೆ ಗಮನ ಹರಿಸಿ ಕೂಡಲೆ ಜೈಲಿನ ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ರೂಪಾ ಅವರು ಸತ್ಯನಾರಾಯಣ ಅವರಿಗೆ ಪತ್ರ ಬರೆದಿದ್ದಾರೆ.

Also Read  ಜೈಲಿಗೂ ವಕ್ಕರಿಸಿದ ಸೋಂಕು ➤ 20 ಕೈದಿಗಳು, 6 ಮಂದಿ ಜೈಲು ಸಿಬ್ಬಂದಿಗೆ ಕೊರೊನಾ ಪಾಸಿಟಿವ್

error: Content is protected !!
Scroll to Top