(ನ್ಯೂಸ್ ಕಡಬ) newskadaba.com,ಜು.06 : ರಾಷ್ಟ್ರೀಯ ಹೆದ್ದಾರಿ-66ರ ಡಿಕ್ಸಿ ಕ್ರಾಸ್ ಸಮೀಪ ಪೂರ್ವಾನುಮತಿ ಇಲ್ಲದೆ ಬೃಹತ್ ಯಂತ್ರೋಪಕರಣ ಸಾಗಿಸುತ್ತಿದ್ದ ಟ್ರೇಲರ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಈ ಸಂಬಂಧ ಮೂವರ ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 5ರಂದು ಸಂಜೆ ಪಣಂಬೂರು ಕಡೆಯಿಂದ ಬರುತ್ತಿದ್ದ ಬೃಹತ್ ಟ್ರೇಲರ್ ಅನ್ನು ಚಾಲಕ ವಿನೋದ್ ಕುಮಾರ್ ಸಿಂಗ್ ಬೇಜವಾಬ್ದಾರಿಯಿಂದ ಚಲಾಯಿಸಿ ಅಪಘಾತ ಎಸಗಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು.ಪ್ರಾಥಮಿಕ ತನಿಖೆಯಲ್ಲಿ, ವಾಹನ ಸಾಗಾಟಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬುದು ತಿಳಿದುಬಂದಿದೆ.
ಟ್ರೇಲರ್ ಚಾಲಕ, ‘EXG Express Global Logistics’ ಸಂಸ್ಥೆಯ ಮಾಲೀಕ ಹಾಗೂ ಯಂತ್ರೋಪಕರಣ ಕಂಪನಿಯ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯಡಿ (ಅಪರಾಧ ಸಂಖ್ಯೆ: 173/2026) ಪ್ರಕರಣ ದಾಖಲಿಸಲಾಗಿದೆ.ಬೃಹತ್ ವಾಹನಗಳ ಚಾಲಕರು ಮತ್ತು ಸಾಗಾಟ ಸಂಸ್ಥೆಗಳು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ನಿಯಮಾನುಸಾರ ಅನುಮತಿ ಪಡೆದೇ ವಾಹನ ಚಲಾಯಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.









