(ನ್ಯೂಸ್ ಕಡಬ) newskadaba.com, ಜು.03 ಉಡುಪಿ: ಪೆಟ್ರೋಲ್ ಬಂಕ್ ಒಂದರಲ್ಲಿ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು, ಹಣ ಪಾವತಿಸದೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ನಟಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಶಿರ್ವ ಕೋಟೆಕಾರ್ನ ಮಹಮ್ಮದ್ ರಿಯಾಜ್ (26), ಭೂತಬೆಟ್ಟಿನ ಮಹಮ್ಮದ್ ಅಫ್ರಾಜ್ (23) ಮತ್ತು ಉಡುಪಿ ಅಂಬಾಗಿಲಿನ ಆಶಿಲ್ (21).
ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರು.ಜೂನ್ 27ರ ರಾತ್ರಿ ಕುರ್ಕಾಲು ಗ್ರಾಮದ ಸುಭಾಸ್ ನಗರದ ಪೆಟ್ರೋಲ್ ಬಂಕ್ನಲ್ಲಿ ₹4,711 ಮೌಲ್ಯದ ಡೀಸೆಲ್ ತುಂಬಿಸಿಕೊಂಡು, ಬಿಲ್ ಕೇಳುವ ನೆಪದಲ್ಲಿ ಸಿಬ್ಬಂದಿಯನ್ನು ನಂಬಿಸಿ ಕಾರಿನೊಂದಿಗೆ ಆರೋಪಿಗಳು ಪರಾರಿಯಾಗಿದ್ದರು.
ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಕಾಪು ಸಿಐ ಅಝಮತ್ ಆಲಿ ಮಾರ್ಗದರ್ಶನದಲ್ಲಿ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಶಿರ್ವ ಪಿಎಸ್ಐಗಳಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಮತ್ತು ತಂಡವು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಈ ತಂಡವು ಬೇರೆಲ್ಲೂ ಇಂತಹ ವಂಚನೆ ಎಸಗಿದೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.









