ದಕ್ಷಿಣ ಕನ್ನಡ : ಕರಾವಳಿಯಲ್ಲಿ ಹೆಚ್ಚುತ್ತಿದೆ ತಾಪಮಾನ – ಬಿಸಿಲಾಘಾತದ ಆತಂಕ



(ನ್ಯೂಸ್‌ ಕಡಬ) newskadaba.com,  .29: ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ಮಧ್ಯಾಹ್ನಕ್ಕಾಗುವಾಗ ಜನರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಮಧ್ಯಾಹ್ನ ವೇಳೆ ಸುಮಾರು 38 ಡಿ.ಸೆ.ಗೂ ಅಧಿಕ ತಾಪಮಾನ ದಾಖಲಾಗುತ್ತಿದೆ..







ಕೆಲವು ಕಡೆ ಮಳೆ ಬಂದರೂ ತಾಪಮಾನದಲ್ಲಿ ಇಳಿಕೆ ಕಾಣುತ್ತಿಲ್ಲ. ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಬೆಳಗ್ಗೆಯಿಂದಲೇ ಮೋಡದ ಜತೆಗೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಈ ನಡುವೆ ಜನರು ಕುಸಿದು ಬೀಳುತ್ತಿರುವ, ಮಲಗಿದ್ದಲ್ಲೇ ಸಾವನ್ನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ. ಎ.22ರಂದು ಕಾರ್ಕಳದ ಕುಕ್ಕುಂದೂರಿನ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದರು. ಎ. 21ರಂದು ಕೆಲಸ ಮುಗಿಸಿ ಮಲಗಿದ್ದ ಕಾರ್ಕಳದ ಕಾರ್ಮಿಕರೊಬ್ಬರು ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಎ.21ರಂದು ಬೆಂಗಳೂರಿನಿಂದ ಮಲ್ಪೆಗೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿ ಮಧ್ಯಾಹ್ನ ಮಲಗಿದ್ದ ಕೋಣೆಯಲ್ಲಿ ಮೃತಪಟ್ಟಿದ್ದರು.






ಎ.10ರಂದು ಕದ್ರಿಯ ಹೊಟೇಲ್‌ ಕಾರ್ಮಿಕ ಮಧ್ಯಾಹ್ನ ವಿಶ್ರಾಂತಿ ಪಡೆಯಲು ಮಲಗಿದ್ದವರು ಅಲ್ಲೇ ಮೃತಪಟ್ಟಿದ್ದರು. ಎ.13ರಂದು ಮಣಿಪಾಲದ ಲಾಡ್ಜ್ ನಲ್ಲಿ ತಂಗಿದ್ದ ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಮಲಗಿದ್ದಲ್ಲೇ ಸಾವನ್ನಪ್ಪಿದ ಬಗ್ಗೆ ವರದಿಯಾಗಿತ್ತು. ತೀರಾ ಇತ್ತೀಚೆಗೆ ಉಜಿರೆಯಲ್ಲೂ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದರು. ಈ ಎಲ್ಲ ಘಟನೆಗಳು ಬಿಸಿಲಾಘಾತದಿಂದಲೇ ನಡೆದಿದೆ ಎಂದು ಇನ್ನೂ ಖಚಿತಗೊಂಡಿಲ್ಲ. ಆದರೂ ಇದು ಕೂಡ ಒಂದು ಕಾರಣ ಎಂದು ಅಂದಾಜಿಸಲಾಗಿದೆ. ಬಿಸಿಲಿನ ಆಘಾತದಿಂದ ಕಾಸರಗೋಡು ರಾಜಪುರಂ ಕೋಳಿಚ್ಚಾಲ್‌ನ 48 ವರ್ಷದ ವ್ಯಕ್ತಿ, ಕುಂಬಳೆಯ ರಿಕ್ಷಾ ಚಾಲಕ ಸಹಿತ ಕೇರಳ ರಾಜ್ಯದ 20 ಕ್ಕೂ ಅಧಿಕ ಮಂದಿಗೆ ಬಿಸಿಲಿನ ಸುಟ್ಟ ಗಾಯಗಳಾಗಿವೆ. ಕುಂಬಳೆಯ ರಿಕ್ಷಾ ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!
Scroll to Top