ಮೋದಿ ಅಲೆಗೆ ಕೊಚ್ಚಿ ಹೋದ ಕಾಂಗ್ರೆಸ್ ► ಕರಾವಳಿಯಲ್ಲಿ 7 ಕ್ಷೇತ್ರದಲ್ಲಿ ವಿಜಯದ ಪತಾಕೆ ಹಾರಿಸಿದ ಬಿಜೆಪಿ, 1 ಕ್ಷೇತ್ರಕ್ಕೆ ತೃಪ್ತಿಪಟ್ಟ ಕಾಂಗ್ರೆಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.15. ಕರಾವಳಿಯಲ್ಲಿ ಭರ್ಜರಿ ಯಶ ಸಾಧಿಸಿರುವ ಬಿಜೆಪಿಯು ಕಾಂಗ್ರೆಸ್‌ ಮುಕ್ತ ಕರ್ನಾಟಕದ ಕನಸನ್ನು ನನಸಾಗಿಸಿದ್ದು, ಮೋದಿ ಅಲೆಗೆ ಕಾಂಗ್ರೆಸ್ ಕೊಚ್ಚಿ ಹೋಗಿದೆ.

ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಎಳೆದುಕೊಂಡಿರುವ ಬಿಜೆಪಿಯು ಕರಾವಳಿಯಲ್ಲಿ ವಿಜಯದ ಪತಾಕೆಯನ್ನು ಹಾರಿಸಿದೆ. ಬಿಜೆಪಿಯು ರಾಜ್ಯದಲ್ಲೇ ಮೊದಲ ಖಾತೆಯನ್ನು ತೆರೆದಿದ್ದು ಮೂಡಬಿದಿರೆಯಲ್ಲಿ. ಮಾಜಿ ಸಚಿವ ಕಾಂಗ್ರೆಸ್‌ನ ಅಭ್ಯರ್ಥಿ ಅಭಯಚಂದ್ರ ಜೈನ್ ರನ್ನು 22 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಭರ್ಜರಿಯಾಗಿ ಸೋಲಿಸಿದ್ದಾರೆ. ಬಂಟ್ವಾಳದಲ್ಲಿ ರಮಾನಾಥ ರೈಯವರನ್ನು ಬಿಜೆಪಿಯ ರಾಜೇಶ್ ನಾಯ್ಕ್ ಸೋಲಿಸಿದ್ದು, ಬೆಳ್ತಂಗಡಿಯಲ್ಲಿ ವಸಂತ ಬಂಗೇರ ವಿರುದ್ಧ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಜಯ ಸಾಧಿಸಿದ್ದಾರೆ.

ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ರವರನ್ನು ಮಣಿಸಿದ ಎಸ್ ಅಂಗಾರ ಆರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪುತ್ತೂರಿನಲ್ಲಿ ಶಕುಂತಲಾ ಶೆಟ್ಟಿಯವರನ್ನು ಮಣಿಸಿದ ಸಂಜೀವ ಮಠಂದೂರು ವಿಜಯದ ನಗೆ ಬೀರಿದ್ದಾರೆ. ಮಂಗಳೂರು ದಕ್ಷಿಣದಲ್ಲಿ ಹಾಲಿ ಶಾಸಕ ಜೆ.ಆರ್. ಲೋಬೋರವರನ್ನು‌ ಬಿಜೆಪಿಯ ವೇದವ್ಯಾಸ ಕಾಮತ್ ಮಣಿಸಿದ್ದು, ಉತ್ತರದಲ್ಲಿ ಮೊಯ್ದೀನ್ ಬಾವಾರನ್ನು ಡಾ. ಭರತ್ ಶೆಟ್ಟಿ ಸೋಲಿಸಿದ್ದಾರೆ.

ಮಂಗಳೂರು ಕ್ಷೇತ್ರದಲ್ಲಿ ಮಾತ್ರ ಮತದಾರರು ಕಾಂಗ್ರೆಸ್ ಅಭ್ಯರ್ಥಿ, ಆಹಾರ ಸಚಿವ ಯು.ಟಿ.ಖಾದರ್ ರವರ ‘ಕೈ’ ಹಿಡಿದಿದ್ದಾರೆ. ಯು.ಟಿ.ಖಾದರ್ ಬಿಜೆಪಿಯ ಸಂತೋಷ್ ಕುಮಾರ್ ಬೋಳಿಯಾರ್ ರವರನ್ನು 15 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ.

error: Content is protected !!

Join the Group

Join WhatsApp Group