(ನ್ಯೂಸ್ ಕಡಬ) newskadaba.com, ಎ.08 ಬೆಂಗಳೂರು : ಇರಾನ್ – ಇಸ್ರೇಲ್ ನಡುವಿನ ಯುದ್ಧ ಭಾರತದ ಮೇಲೆ ಪರಿಣಾಮ ಬೀರಿದೆ. ಕರ್ನಾಟಕದಲ್ಲಿ ಸದ್ಯ ಆಟೋ ಎಲ್ಪಿಜಿ ಅಭಾವ ಎದುರಾಗಿದೆ. ಈ ಬಿಕ್ಕಟ್ಟುಆಟೋ ಚಾಲಕರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.
ಆಟೋ ಚಾಲಕರ ಪರದಾಟ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಲ್ಪಿಜಿ ಸಿಗದೆ ಚಾಲಕರು ಪರದಾಡುತ್ತಿದ್ದಾರೆ. ಬಾಡಿಗೆ ಸಿಗುತ್ತಿಲ್ಲ, ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಅನಿವಾರ್ಯವಾಗಿ ತಮ್ಮ ಸ್ವಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ನಗರದ ಎಲ್ಪಿಜಿ ವಿತರಣಾ ಕೇಂದ್ರಗಳಲ್ಲಿ ಕಿಲೋಮೀಟರ್ಗಟ್ಟಲೆ ಉದ್ದದ ಸಾಲುಗಳು ಕಂಡುಬರುತ್ತಿವೆ. ಗಂಟೆಗಟ್ಟಲೆ ಕಾದರೂ ಸಿಲಿಂಡರ್ ಸಿಕ್ಕೇ ಬಿಡುತ್ತದೆ ಎಂಬ ಖಾತರಿ ಇಲ್ಲ. ಇದರಿಂದಬೇಸತ್ತಿರುವ ಅನೇಕ ಚಾಲಕರು ತಮ್ಮ ದೈನಂದಿನ ಜೀವನ ನಿರ್ವಹಣೆ ಅಸಾಧ್ಯವೆಂದು ಭಾವಿಸಿ, ತಾತ್ಕಾಲಿಕವಾಗಿ ಬಾಡಿಗೆ ವೃತ್ತಿಯನ್ನು ನಿಲ್ಲಿಸಿ ಊರುಗಳಿಗೆ ತೆರಳುತ್ತಿದ್ದಾರೆ.
ದುಡಿಮೆ ಸ್ಥಗಿತ
ಗ್ಯಾಸ್ ಲಭ್ಯವಿಲ್ಲದ ಕಾರಣ ದುಡಿಮೆ ಸ್ಥಗಿತಗೊಂಡಿದ್ದು, ಮನೆ ಬಾಡಿಗೆ, ಆಟೋ ಕಂತು ಮತ್ತು ದಿನನಿತ್ಯದ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.









