(ನ್ಯೂಸ್ ಕಡಬ) newskadaba.com ಕಡಬ, ಮಾ.07: ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಿಡಿಮದ್ದು ತಯಾರಿಕಾ ಘಟಕದಲ್ಲಿ ರಾಸಾಯನಿಕ ಮಿಶ್ರಣದಲ್ಲಿ ಸಮಸ್ಯೆಯಾಗಿ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ. ಕಳೆದ ಹಲವಾರು ವರುಷಗಳಿಂದ ಅಬ್ದುಲ್ ಗಫೂರ್ ಎಂಬವರು ಶೆಡ್ ನಿರ್ಮಿಸಿ ಸಿಡಿಮದ್ದು ತಯಾರಿಕೆ ಮಾಡುತ್ತಿದ್ದರು. ಈ ಘಟಕದಲ್ಲಿ ಸಿಡಿಮದ್ದಿಗೆ ಬೇಕಾದ ರಾಸಾಯನಿಕವನ್ನು ಮಿಶ್ರಣ ಮಾಡಿ ಕಾರ್ಮಿಕರು ಸಂಜೆಯ ಕಾಫಿ ಕುಡಿಯುವ ಸಲುವಾಗಿ ತೆರಳುತ್ತಿದ್ದ ಸಂದರ್ಭ ಏಕಾಏಕಿ ಘಟಕ ಸ್ಫೋಟಗೊಂಡಿದೆ.
ಸ್ಪೋಟದ ತೀವ್ರತೆಗೆ ೫ ಸೆಂಟ್ಸ್ ಜಾಗ ಸಂಪೂರ್ಣ ಹಾನಿಯಾಗಿದೆ. ಆದರೆ ಯಾವುದೇ ಜೀವ ಹಾನಿಯಾಗಿಲ್ಲ. ಘಟನೆ ನಡೆದ ಕೂಡಲೇ ನೀರು ಹಾಕಿ ಬೆಂಕಿ ಆರಿಸುವ ಕಾರ್ಯವನ್ನು ಮಾಡಲಾಯಿತು. ಘಟನೆಯಿಂದಾಗಿ ಆಸುಪಾಸಿನ ಕೆಲವು ಮನೆಗಳಿಗೆ ಹಾನಿಯಾಗಿರುವುದಾಗಿ ಮಾಹಿತಿ ಲಭಿಸಿದೆ.ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರವಿ , ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ , ವಿಟ್ಲ ಠಾಣಾ ಎಸ್.ಐ. ರಾಮಕೃಷ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟಕದಲ್ಲಿ ಪಟಾಕಿ ಸಿಡಿದು ಭಾರೀ ಸ್ಫೋಟಗೊಂಡ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
2017ರಲ್ಲಿ ಇದೇ ಘಟಕದಲ್ಲಿ ಸ್ಪೋಟ
2017 ಮಾ. 20ರಂದು ಸಂಜೆ ಸಮಯ ಅಮೋನಿಯಮ್ ನೈಟ್ರೇಟ್ ಹಾಗೂ ಗಂಧಕದ ಮಿಶ್ರಣ ಮಾಡುತ್ತಿದ್ದ ಸಂದರ್ಭ ಏಕಾಏಕಿ ಸ್ಪೋಟಗೊಂಡ ಹಿನ್ನೆಲೆ ಅಲ್ಲಿದ್ದ ಕಾರ್ಮಿಕರ ಪೈಕಿ ಇಬ್ಬರು ಛಿದ್ರಗೊಂಡಿದ್ದರು. ಹಲವು ಮನೆ, ಅಂಗಡಿಗಳು ಹಾನಿಯಾಗಿತ್ತು.ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನೂ ಪ್ರಕರಣ ಇತ್ಯಾರ್ಥಗೊಂಡಿಲ್ಲ. ಇದೀಗ ಅದರ ಸಮೀಪವೇ ಮತ್ತೊಂದು ಘಟನೆ ಸಂಭವಿಸಿದೆ.








