(ನ್ಯೂಸ್ ಕಡಬ) newskadaba.com, ಡಿ.16 ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ BEO ಸಿಎನ್ ರಾಜು ಅವರು ಎಸ್ಸೆಸೆಲ್ಸಿ ಫಲಿತಾಂಶವನ್ನು ಸುಧಾರಿಸಲು ವಿನೂತನ ಮತ್ತು ಮಾದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಈ ಅಧಿಕಾರಿ ತಮ್ಮ ತಾಲ್ಲೂಕನ್ನು ಮೈಸೂರು ಜಿಲ್ಲೆಯಲ್ಲೇ ಫಲಿತಾಂಶದಲ್ಲಿ ಮುಂಚೂಣಿಗೆ ತರಲು ‘ಅದಕ್ಕಾಗಿಯೇ ನಾನು ಓದುತ್ತಿದ್ದೇನೆ’ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದಾರೆ.
ಬೆಳಗ್ಗೆ-ರಾತ್ರಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ BEO
BEO ರಾಜು ಅವರ ಕಾರ್ಯವೈಖರಿ ನಿಜಕ್ಕೂ ಮೆಚ್ಚುವಂತಿದೆ. ಅವರು ಬೆಳಗ್ಗೆ ಮತ್ತು ರಾತ್ರಿ ಎರಡೂ ಸಮಯಗಳಲ್ಲಿ ವಿದ್ಯಾರ್ಥಿಗಳ ನಿವಾಸಕ್ಕೆ ಭೇಟಿ ನೀಡುತ್ತಾರೆ. ಬೆಳ್ಳಂ ಬೆಳಗ್ಗೆ, ಅಂದರೆ ಮುಂಜಾನೆ 5 ಗಂಟೆಗೆ, ಮಕ್ಕಳ ಮನೆಗೆ ತೆರಳಿ ಅವರನ್ನು ಎಬ್ಬಿಸಿ, ಓದಿನ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಇಷ್ಟೇ ಅಲ್ಲದೆ, ಮತ್ತೆ ರಾತ್ರಿ 10 ರಿಂದ 11 ಗಂಟೆ ವೇಳೆಗೆ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಅವರ ಓದಿನ ಪ್ರಗತಿಯನ್ನು ಪರಿಶೀಲಿಸಿ, ಅವರ ಅಧ್ಯಯನಕ್ಕೆ ಹುರಿದುಂಬಿಸುವ ಕಾರ್ಯ ಮಾಡುತ್ತಾರೆ. ಈ ಮೂಲಕ ಅವರು ಪೋಷಕರಿಗೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.
ಶಾಲೆಯಲ್ಲೇ ವಾಸ್ತವ್ಯ, ವಿದ್ಯಾರ್ಥಗಳಿಗೆ ಮಾರ್ಗದರ್ಶನ
ಈ ಮಾದರಿ ಅಧಿಕಾರಿಯು ಪ್ರತಿ ವಾರ ತಾಲ್ಲೂಕಿನ ಒಂದೊಂದು ಶಾಲೆಗೆ ಭೇಟಿ ನೀಡಿ ಅಲ್ಲೇ ವಾಸ್ತವ್ಯ ಹೂಡುತ್ತಾರೆ. ಇತ್ತೀಚೆಗೆ ಅವರು ಎಚ್.ಡಿ. ಕೋಟೆ ತಾಲ್ಲೂಕಿನ ಡಿ.ಬಿ. ಕುಪ್ಪೆ ಗ್ರಾಮದ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು SSLC ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಮಾರ್ಗದರ್ಶನವನ್ನೂ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿಎನ್ ರಾಜು ಅವರ ಈ ಸಮರ್ಪಣಾ ಮನೋಭಾವ ಮತ್ತು ವಿದ್ಯಾರ್ಥಿ ಸ್ನೇಹಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.












