ಕಡಬ ಪರಿಸರದಲ್ಲಿ ಮುಂದುವರಿದ ದನಗಳ್ಳರ‌ ಅಟ್ಟಹಾಸ ► ಮರ್ಧಾಳದಲ್ಲಿ ರಸ್ತೆ ಬದಿಯಲ್ಲಿನ ದನ ಕಳ್ಳತನಕ್ಕೆ ವಿಫಲ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಕೆಲ ಸಮಯಗಳಿಂದ ಶಾಂತವಾಗಿದ್ದ ಕಡಬದಲ್ಲಿ ದನಗಳ್ಳರ ಅಟ್ಟಹಾಸ ಮುಂದುವರಿದಿದ್ದು, ಬುಧವಾರ ರಾತ್ರಿ ಮರ್ಧಾಳದಲ್ಲಿ ದನಗಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಮರ್ಧಾಳ ಮುಖ್ಯ ಪೇಟೆಯ ಸರಕಾರಿ ಶಾಲಾ ಮುಂಭಾಗದಲ್ಲಿ ಮಲಗಿದ್ದ ದನಗಳನ್ನು ಬುಧವಾರ ರಾತ್ರಿ ಎರಡು ಗಂಟೆಯ ಸುಮಾರಿಗೆ ಸ್ಕಾರ್ಪಿಯೋದಲ್ಲಿ ಬಂದ ತಂಡವೊಂದು ಎತ್ತಿ ಕಾರಿನೊಳಗಡೆ ಹಾಕುತ್ತಿದ್ದಾಗ ಶಬ್ದ ಕೇಳಿ ಎಚ್ಚರಗೊಂಡ ಸ್ಥಳೀಯ ವ್ಯಕ್ತಿಯೋರ್ವರು ಮನೆಯಿಂದ ಹೊರಬಂದರೆನ್ನಲಾಗಿದೆ‌. ಈ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಬೊಬ್ಬೆ ಹೊಡೆದು ಓಡಿಸಿದ ಕಳ್ಳರು ದೊಡ್ಡ ಕಲ್ಲೊಂದನ್ನು ಮನೆಯ ಬಾಗಿಲಿಗೆ ಎಸೆದಿದ್ದಾರೆ. ಅದೇ ಸಮಯದಲ್ಲಿ ಕಾರೊಳಗಿದ್ದ ದನವೊಂದು ಜೀವ ಭಯದಿಂದ ಕತ್ತಲೆಯಲ್ಲಿ ಓಡಿ ಕಣ್ಮರೆಯಾಗಿದೆ ಎನ್ನಲಾಗಿದೆ. ಆ ಕೂಡಲೇ ಕಳ್ಳರು ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ‌. ಇಲ್ಲದಿದ್ದರೆ ಕಳ್ಳರು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಿ ತಮ್ಮ ಕಾರ್ಯವನ್ನು ಸಾಧಿಸುತ್ತಿದ್ದರೆನ್ನಲಾಗಿದೆ‌.

ಕಡಬ ಪರಿಸರದಲ್ಲಿ ರಸ್ತೆ ಬದಿಯಲ್ಲೇ ದನ ಕರುಗಳು ರಾತ್ರಿ ಹೊತ್ತು ಮಲಗುತ್ತಿರುವುದು ಕಳ್ಳರಿಗೆ ವರದಾನವಾಗಿದೆ. ಈ ಹಿಂದೆಯೂ ಕೇರಳ ನೋಂದಣಿಯ ಸ್ವಿಫ್ಟ್ ಕಾರನ್ಬು ಬಾಡಿಗೆಗೆಂದು ತಂದು ಜಾನುವಾರುಗಳನ್ನು ಕದ್ದು ಸಾಗಿಸುತ್ತಿದ್ದಾಗ ಕಾರು ಕಡಬದ ಕಳಾರ ಸಮೀಪ ಪಲ್ಟಿಯಾದುದರಿಂದ ದನಗಳ ಕಳ್ಳ ಸಾಗಾಣಿಕೆ ಬೆಳಕಿಗೆ ಬಂದಿತ್ತು. ಆ ನಂತರ ದನಗಳ್ಳರ ಹಾವಳಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಇದೀಗ ಕಳ್ಳರ ಕಾಟ ಆರಂಭಗೊಂಡಿದ್ದು, ಸ್ಥಳೀಯರನ್ನು ಆತಂಕಗೊಳಿಸಿದೆ.

error: Content is protected !!

Join the Group

Join WhatsApp Group