(ನ್ಯೂಸ್ ಕಡಬ) newskadaba.com, ಅ.16 ಮಂಗಳೂರು: ಯಕ್ಷಗಾನ ಹಿರಿಯ ಭಾಗವತ ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ(65) ಅವರು ಇಂದು ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮಣ್ಣಾಯರು ಇಂದು ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ‘ರಸರಾಗ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದರು.
ದಾಮೋದರ ಮಂಡೆಚ್ಚರ ಆಪ್ತ ಶಿಷ್ಯ
ಇನ್ನು ದಿನೇಶ್ ಅಮ್ಮಣ್ಣಾಯರು ಹಿರಿಯ ಭಾಗವತ ದಾಮೋದರ ಮಂಡೆಚ್ಚ ಅವರ ಆಪ್ತ ಶಿಷ್ಯ. ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಇವರು ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದರು. ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ಎಡನೀರು ಮಠದ ಪರಮಶಿಷ್ಯರಾದ ಅಮ್ಮಣ್ಣಾಯರು ತಮ್ಮ ಜೀವನ ಅತೀ ಹೆಚ್ಚು ಯಕ್ಷಗಾನ ಭಾಗವತಿಕೆಯನ್ನು ಎಡನೀರು ಮಠದ ಮೇಳ ಹಾಗೂ ಎಡನೀರು ಕ್ಷೇತ್ರದಲ್ಲೇ ಮಾಡಿರುವುದು ವಿಶೇಷ.
ಸಂದ ಪ್ರಶಸ್ತಿಗಳು
ದಿನೇಶ್ ಅಮ್ಮಣ್ಣಾಯ ಅವರ ಅನುಪಮ ಕಲಾ ಸೇವೆಯನ್ನು ಗುರುತಿಸಿ ಉಡುಪಿ ತುಳುಕೂಟವು ಪ್ರತಿಷ್ಠಿತ ‘ಸಾಮಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಮಲ್ಪೆ ರಾಮದಾಸ ಸಾಮಗ, ಅಳಕೆ ರಾಮಯ್ಯ ರೈ, ಕೋಳ್ಯೂರು ರಾಮಚಂದ್ರ ರಾವ್ ಅವರಂತಹ ಮೇರು ಕಲಾವಿದರ ಒಡನಾಟ ಹೊಂದಿದ್ದ ಅಮ್ಮಣ್ಣಾಯರು, ಇತ್ತೀಚೆಗೆ ಎಡನೀರು ಮೇಳದಲ್ಲಿ ತಿರುಗಾಟ ಪೂರ್ಣಗೊಳಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು..








