ಕಡಬ: ಕುಡಿದ ಮತ್ತಿನಲ್ಲಿ ರಸ್ತೆಗೆ ಕಲ್ಲು ಇಟ್ಟು ಕೆಎಸ್ಸಾರ್ಟಿಸಿ ಬಸ್ಸನ್ನು ತಡೆದ ಮದ್ಯಪಾನಿ ► ಕುಡುಕನ ಅವಾಂತರದಿಂದ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ

(ನ್ಯೂಸ್ ಕಡಬ) newskadaba.com ಕಡಬ, ಎ.23. ಮದ್ಯವ್ಯಸನಿಯೋರ್ವನ ಅವಾಂತರದಿಂದ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ದೊರಕಿದ ಘಟನೆ ಸೋಮವಾರದಂದು ಕಡಬ ಪೇಟೆಯಲ್ಲಿ ನಡೆದಿದೆ.

ಕೊಂಬಾರು ನಿವಾಸಿಯೋರ್ವ ಕಳೆದ ಕೆಲವು ಸಮಯಗಳ ಹಿಂದೆ ಕುಡಿದ ಮತ್ತಿನಲ್ಲಿ ತನ್ನಲ್ಲಿದ್ದ ಒಂದು ಲಕ್ಷ ಎಪ್ಪತ್ತೈದು ಸಾವಿರದಷ್ಟು ಹಣವನ್ನು ಕಡಬ ಪೇಟೆಯಲ್ಲಿ ಕಳೆದುಕೊಂಡಿದ್ದನು. ತದನಂತರ ದಿನಾಲೂ ಕುಡಿದು ಕಡಬ ಪೇಟೆಯಲ್ಲಿ ಒಂದಲ್ಲ ಒಂದು ಕೀಟಲೆಗಳನ್ನು ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಈತ ಸೋಮವಾರದಂದು ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಕಡಬಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್ಸಿನ ನಿರ್ವಾಹಕನ ಜೊತೆ ವಾಗ್ವಾದಕ್ಕಿಳಿದಿದ್ದಲ್ಲದೆ ಕಡಬ ಸಂಚಾರಿ ನಿಯಂತ್ರಕರಿಗೂ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾನೆನ್ನಲಾಗಿದೆ. ನಂತರ ಬಸ್ಸನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲವೆನ್ನುತ್ತಾ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಕೆಂಪು ಕಲ್ಲುಗಳನ್ನು ಇಟ್ಟು ರಸ್ತೆಯನ್ನು ತಡೆದಿದ್ದಾನೆ. ಈ ಕುರಿತು ಸಂಚಾರ ನಿಯಂತ್ರಕರು ನೀಡಿದ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಆತನ ಮೂಲಕವೇ ಕಲ್ಲನ್ನು ರಸ್ತೆಯಿಂದ ತೆರವುಗೊಳಿಸಿ ತೆರಳಿದ್ದಾರೆ.

ಅದಾದ ಕೆಲವೇ ಸಮಯಗಳ ನಂತರ ಪುನಃ ಬಂದ ಈತ ಕೆಂಪು ಕಲ್ಲುಗಳನ್ನು ಅಡ್ಡಲಾಗಿ ಇಟ್ಟು ಎರಡನೇ ಬಾರಿಗೆ ಮದ್ಯದಂಗಡಿಗೆ ತೆರಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ಸಾರ್ವಜನಿಕರು ಕಲ್ಲನ್ನು ತೆರವುಗೊಳಿಸಿದ್ದಾರೆ. ಈ ಹಿಂದೆಯೂ ಈತ ಕೆಎಸ್ಸಾರ್ಟಿಸಿ ಬಸ್ಸಿನ ನಿರ್ವಾಹಕನ ಜೊತೆ ಜಗಳವಾಡಿದ್ದಲ್ಲದೆ ಬಸ್ಸಿನ ಗಾಜನ್ನು ಕಲ್ಲೆಸೆದು ಹಾನಿಗೈದಿದ್ದನು. ಈತನ ಅವಾಂತರದಿಂದ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ದೊರಕಿದರೆ, ಪೊಲೀಸರಿಗೆ ಮಾತ್ರ ತಲೆನೋವು ಉಂಟಾಗಿದೆ.

error: Content is protected !!

Join the Group

Join WhatsApp Group