ಸ್ಥಳೀಯಾಡಳಿತ ಉಪಚುನಾವಣೆ ► ವಿಜಯ ಪತಾಕೆ ಹಾರಿಸಿದ ಜೆಡಿಎಸ್ – ಕಾಂಗ್ರೆಸ್, ಬಿಜೆಪಿಗೆ ತೀವ್ರ ಮುಖಭಂಗ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.5. ರಾಜ್ಯದ ಮೂರು ಜಿಲ್ಲೆಗಳ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಕಡೆ ಜಾತ್ಯತೀತ ಜನತಾದಳ (ಜೆಡಿಎಸ್) ಜಯಭೇರಿ ಬಾರಿಸಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಮುಖಭಂಗ ಅನುಭವಿಸಿವೆ.

ಮೈಸೂರು ನಗರಪಾಲಿಕೆ 32ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‍ನ ಎಸ್‍ಬಿಎಂ ಮಂಜು ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಮಾದೇಶ್ ಅವರನ್ನು 309 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್‍ನ ಪ್ರಕಾಶ್ ಅವರು ಕೇವಲ 329 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಸ್‍ಬಿಎಂ ಮಂಜು ಅವರು ಒಟ್ಟು 2426 ಮತಗಳನ್ನು ಪಡೆದಿದ್ದು, ಬಿಜೆಪಿಯ ಕೆ.ಮಾದೇಶ್ ಅವರು 2117 ಮತ ಪಡೆದಿದ್ದಾರೆ.

 ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕೊಪ್ಪ ಜಿಲ್ಲಾ ಪಂಚಾಯ್ತಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರೇಣುಕಾ ರಾಮಕೃಷ್ಣ ಅವರು 2684 ಮತಗಳ ಅಂತರದಿಂದ ಜಯಗಳಿಸಿ ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ ಕಲಾವತಿ ಪ್ರಕಾಶ್ ಅವರನ್ನು ಪರಾಭವಗೊಳಿಸಿದ್ದಾರೆ. ಬಿಜೆಪಿಯ ಪುಟ್ಟಮ್ಮ 302 ಮತಗಳನ್ನು ಪಡೆದಿದ್ದಾರೆ. ಮಂಡ್ಯ ನಗರಸಭೆಯ 28ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‍ನ ರಾಜು ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ದೇವಯ್ಯ ಅಲಿಯಾಸ್ ಪಾಪಣ್ಣ ಅವರನ್ನು 207 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಬಿಜೆಪಿಯ ತಾಯಮ್ಮ 79 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿ.ಎಸ್.ರಾಜು ಅವರು ಪಡೆದ ಒಟ್ಟು 1153, ಕಾಂಗ್ರೆಸ್‍ನ ದೇವಯ್ಯ 946 ಮತ ಪಡೆದಿದ್ದಾರೆ.

ಕೋಲಾರ ನಗರಸಭೆ 21ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿಯೂ ಜೆಡಿಎಸ್‍ನ ಮೋಹನ್ ಪ್ರಕಾಶ್(ಬಾಬು) 158 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್‍ನ ಮೋಹನ್‍ಪ್ರಕಾಶ್ 1069 ಮತ ಗಳಿಸಿ ವಿಜಯಿಯಾದರೆ ಕಾಂಗ್ರೆಸ್‍ನ ರಮೇಶ್ 911 ಮತ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಯರಬ್ ಬಾಬಾ ಅವರು 59 ಮತಗಳನ್ನು ಪಡೆದಿದ್ದಾರೆ. ಇನ್ನೊಂದೆಡೆ ಸೊರಬ ಗ್ರಾಮಪಂಚಾಯ್ತಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯಶಾಲಿಯಾಗಿದ್ದಾರೆ.

error: Content is protected !!

Join the Group

Join WhatsApp Group