(ನ್ಯೂಸ್ ಕಡಬ) newskadaba.com ಎ. 29: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ.


ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ತಮ್ಮ ಒಂದು ಹೇಳಿಕೆಯಲ್ಲಿ, “ಚೀನಾ ಕೂಡ ಕಾಶ್ಮೀರದ ಒಂದು ಭಾಗವನ್ನು ಹೊಂದಿದೆ. ಬೀಜಿಂಗ್ ಇಡೀ ಕಾಶ್ಮೀರ ಸಮಸ್ಯೆಯಲ್ಲಿ ಸಹ ಪಾಲುದಾರ. ಸಿಂಧೂ ನದಿ ಕೂಡ ಚೀನಾದ ಮೂಲಕ ಹಾದುಹೋಗುತ್ತದೆ, ಅದು ಟಿಬೆಟ್ನಿಂದ ಬಂದಿದೆ. ಚೀನಾ ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸಿದೆ” ಎಂದಿದ್ದಾರೆ.

ಪಹಲ್ಗಾಮ್ ಘಟನೆಯ ನಂತರ ಪಾಕಿಸ್ತಾನದಲ್ಲಿ ಬೆದರಿಕೆಗಳು ಹೆಚ್ಚುತ್ತಿದ್ದು, ಭಾರತ ಯಾವುದೇ ಸಮಯದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು. ಪಾಕಿಸ್ತಾನವು ಹೆಚ್ಚು ಜಾಗರೂಕವಾಗಿದೆ ಎಂದ ಅವರು, ಪಾಕಿಸ್ತಾನದ ಪರಮಾಣು ಸಾಮರ್ಥ್ಯವನ್ನು ಒತ್ತಿ ಹೇಳಿದ್ದಾರೆ. ದೇಶದ ಅಸ್ತಿತ್ವಕ್ಕೆ ನೇರ ಬೆದರಿಕೆ ಇದ್ದಾಗ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದು ಎಂದು ತಿಳಿಸಿದ್ದಾರೆ.













