(ನ್ಯೂಸ್ ಕಡಬ) newskadaba.com ಎ. 29 ಚಿಕ್ಕಬಳ್ಳಾಪುರ : ಪಂಚಗಿರಿಗಳ ನಾಡು ಎಂಬ ಖ್ಯಾತಿಯ ಚಿಕ್ಕಬಳ್ಳಾಪುರದಂತೆ ಜಿಲ್ಲೆಯಲ್ಲಿ ಹಬ್ಬಿನಿಂತ ಮಲೆಯ ಸಾಲುಗಳಲ್ಲಿ ಡೈನಮೈಟ್ಗಳ ಭೋರ್ಗೆರೆತ,ಜಲ್ಲಿ ಕಲ್ಲುಗಳ ಸಾಗಾಟದ ನಡುವೆ ರೈತಾಪಿ ವರ್ಗದ ಎದೆಗೆ ಗುಂಡು ಹಾರಿಸಲಾಗಿದೆ. ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಲ್ಲು ಕ್ವಾರಿಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಕೃತಿಕ ಸಂಪ ನ್ಮೂಲಗಳ ಹರಣ ನಾಗರೀಕರನ್ನು ದಿಗಿಲುಬೀಳುವಂತೆ ಮಾಡಿರುವುದೇ ಏ28ರ ಮಂಚೇನಹಳ್ಳಿ ಬಂದ್ಗೆ ಕಾರಣವಾಗಿದೆ.

ಹೌದು. ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚಿನ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದು ಇವುಗಳ ಕಾರಣವಾಗಿ ಇಲ್ಲಿ ನಿತ್ಯವೂ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗಣಿಗಾರಿಕೆಗೆ ಅವಶೇಷಗಳನ್ನು ಸಾಗಿಸಲು ಬಳಕೆಯಾಗುವ ಟಿಪ್ಪರ್ಗಳಿಂದಾಗಿ ರಾಷ್ಟೀಯ ಹೆದ್ದಾರಿ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಘಟಿಸಿ ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಹೊಸ ಸೇರ್ಪಡೆ ಏ.23ರಂದು ಕನಗಾನಕೊಪ್ಪ ಗ್ರಾಮದಲ್ಲಿ ಕ್ವಾರಿಗೆ ರಸ್ತೆ ನಿರ್ಮಾಣ ಮಾಡುವಾಗ ನಡೆದ ಶೂಟೌಟ್ ಘಟನೆಯಾಗಿದೆ.
ಫೆಬ್ರವರಿ 2021ರಲ್ಲಿ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಗ್ರಾಮದ ಬೆಟ್ಟಗುಡ್ಡಗಳಲ್ಲಿ ನಡೆದ ಜಿಲೆಟಿನ್ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟ ಘಟನೆ ರಾಜ್ಯವೇ ಜಿಲ್ಲೆಯತ್ತ ತಿರುಗಿ ನೋಡು ವಂತೆ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ.