(ನ್ಯೂಸ್ ಕಡಬ) newskadaba.com ಮಾ. 07 ಬೆಂಗಳೂರು: ಭ್ರಷ್ಟಾಚಾರ, ದುರಾಡಳಿತ ಕುರಿತು ಸಾಲು ಸಾಲು ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಾದ್ಯಂತ ಸಬ್-ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದರು.
2022ನೇ ಸಾಲಿನಲ್ಲಿ ಕಾರ್ಯಾಚರಣೆ ಕೈಗೊಂಡ ಸಬ್ ರಿಜಿಸ್ಟ್ರಾರ್ ಗಳಿಗೆ ಮತ್ತೆ ದಿಢೀರ್ ಭೇಟಿ ನೀಡಿದಾಗಲೂ ಅದೇ ನ್ಯೂನತೆ ಕಂಡು ಬಂದಿದ್ದು, ಈ ವೇಳೆ ಅಧಿಕಾರಿಗಳನ್ನು ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಗಂಗಾನಗರ, ಬ್ಯಾಟರಾಯನಪುರ ಸಬ್ರಿಜಿಸ್ಟಾರ್ ಕಚೇರಿ ಮೇಲೆ ಕಾರ್ಯಾಚರಣೆ ಕೈಗೊಂಡರೆ, ನ್ಯಾ.ಕೆ.ಎನ್.ಫಣೀಂದ್ರ ಅವರು ಯಲಹಂಕ, ಜಾಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನ್ಯಾ.ಬಿ.ವೀರಪ್ಪ ಅವರು ವಿಜಯನಗರ, ಕೆಂಗೇರಿ, ತಾವರೆಕೆರೆ, ರಾಮನಗರ ಸಬ್ ರಿಜಿಸ್ಟಾ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ದಾಸನಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 20 ಸಾವಿರ ನಗದನ್ನು ಕಸದಬುಟ್ಟಿಯಲ್ಲಿ ಕರ್ಚೀಫ್ನಲ್ಲಿ ಸುತ್ತಿ ಹಾಕಿರುವುದು ಕಂಡು ಬಂದಿತ್ತು. ಅಲ್ಲದೇ, ಗುಮಾಸ್ತನ ಫೋನ್ ಪೇ ಅಕೌಂಟ್ ಪರಿಶೀಲನೆ ನಡೆಸಿದಾಗ ಪ್ರತಿ ದಿನ ಹಣ ಬಂದಿರುವುದು ಕಂಡು ಬಂದಿದೆ.