(ನ್ಯೂಸ್ ಕಡಬ) newskadaba.com ಫೆ. 14. ಬೆಂಗಳೂರು: ತನ್ನೂರಿಗೆ ಬರುವ ಸಂತೋಷದಲ್ಲಿದ್ದ ಬೆಳ್ತಂಗಡಿಯ ಸಂಜಯನಗರ ನಿವಾಸಿ ಹಿದಾಯತ್ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಘಟನೆ ಫೆ.13ರ ತಡ ರಾತ್ರಿ ನಡೆದಿದೆ.
ಶುಕ್ರವಾರ ಊರಿಗೆ ಮರಳುವ ಸಂತೋಷದಲ್ಲಿದ್ದ ಹಿದಾಯತ್ ಅವರು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ತನ್ನನ್ನು ಕರೆತರಲು ತನ್ನ ಸ್ನೇಹಿತ ರಫೀಕ್ ಎಂಬವರಿಗೆ ಕರೆ ಮಾಡಿ ಹೇಳಿದ್ದರು. ಜಿದ್ದಾದಿಂದ ರಾತ್ರಿ 10.30 ರ ವಿಮಾನದಲ್ಲಿ ಹೊರಟು ಬೆಳಗಿನ ಜಾವ ಮಂಗಳೂರು ವಿಮಾನ ನಿಲ್ದಾಣ ತಲುಪುವವರಿದ್ದರು.
ಆದರೆ ಹಿದಾಯತ್ ಜಿದ್ದಾ ವಿಮಾನ ನಿಲ್ದಾಣಕ್ಕೆ ಕಾರಲ್ಲಿ ಬಂದು ತಲುಪಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಅಲ್ಲಿನ ವಿಮಾನ ನಿಲ್ದಾಣದ ಪಕ್ಕದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ. ಅತ್ಯುತ್ತಮ ಹಿನ್ನಲೆ ಗಾಯಕರೂ ಆಗಿದ್ದ ಅವರು ಆರಂಭದಲ್ಲಿ ಉದ್ಯೋಗ ನಿಮಿತ್ತ ಬಹರೈನ್ ಗೆ ತೆರಳಿದ್ದವರು ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿದ್ದು ಕಾರ್ಗೊ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ ಅಬ್ದುಲ್ ರಖಾಕ್, ತಾಯಿ ಶಂಶಿರ ಬಾನು, ಪತ್ನಿ ರೇಷ್ಮಾ ಹಾಗೂ ಒಬ್ಬ ಮಗ, ಮೂವರು ಹೆಣ್ಣು ಮಕ್ಕಳು ಹಾಗೂ ಕುಟುಂಬದವರುನ್ನು ಅಗಲಿದ್ದಾರೆ.