ಅರಿಯಡ್ಕ: ಪೊಲೀಸರೆಂದು ಹೇಳಿ ಮನೆಗೆ ಬಂದ ಅಪರಿಚಿತರು ► ಠಾಣೆಗೆ ಬರಬೇಕೆಂದು ನಂಬಿಸಿ ವ್ಯಕ್ತಿಯ ಅಪಹರಣ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.27. ಪೊಲೀಸರೆಂದು ನಂಬಿಸಿ ವ್ಯಕ್ತಿಯೋರ್ವರನ್ನು ಅಪಹರಿಸಿದ ಘಟನೆ ತಾಲೂಕಿನ ಅರಿಯಡ್ಕ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುತ್ಯಾಡಿ ಶ್ರೀಧರ ಎಂಬವರ ಮನೆಗೆ ಸೋಮವಾರ ರಾತ್ರಿ ಪೊಲೀಸ್ ಡ್ರೆಸ್ ಧರಿಸಿ ಇಬ್ಬರು ಬಂದಿದ್ದು, ಬಂದವರು ಸಂಪ್ಯ ಪೊಲೀಸ್ ಠಾಣೆಯಿಂದ ಬಂದಿರುತ್ತೇವೆ ನೀವು ಠಾಣೆಗೆ ಬನ್ನಿ ಎಂದು ತುಳು ಭಾಷೆಯಲ್ಲಿ ಹೇಳಿ ಶ್ರೀಧರರವರನ್ನು ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಈ ಬಗ್ಗೆ ಮಂಗಳವಾರದಂದು ಸಂಪ್ಯ ಠಾಣೆಯಲ್ಲಿ ಬಂದು ವಿಚಾರಿಸಿದಾಗ ಠಾಣೆಗೆ ಕರೆದುಕೊಂಡು ಬಾರದೇ ಇರುವ ವಿಚಾರ ತಿಳಿದಿದ್ದು, ಶ್ರೀಧರರವರನ್ನು ಯಾರೋ ಅಪರಿಚಿತರು ಯಾವುದೋ ಉದ್ದೇಶದಿಂದ ಪೊಲೀಸ್ ಎಂದು ನಂಬಿಸಿ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶ್ರೀಧರರವರ ಪತ್ನಿ ಸೌಮ್ಯರವರು ತನ್ನ ಪತಿಯನ್ನು ಅಪಹರಿಸಲಾಗಿದೆ ಎಂದು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top