(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಗೌಡಿಗೆ ನಿವಾಸಿ ತೇಜಕುಮಾರ ಯಾನೆ ತಾರಾನಾಥ(38ವ) ಎಂಬವರ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರದಂದು ಪತ್ತೆಯಾಗಿದೆ.

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಾರ್ಚ್ 21 ರಂದು ತನ್ನ ಮನೆಯಿಂದ ಹೊರಟವರು ಮನೆಯ ಕಡೆ ಬಾರದೆ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದರಾದರೂ ಎಲ್ಲೂ ಸುಳಿವು ದೊರೆತಿರಲಿಲ್ಲ. ಸೋಮವಾರದಂದು ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದ ಕೊಣಾಜೆ ರಕ್ಷಿತಾರಣ್ಯದ ಓಟಿಮಾರ್ ಎಂಬಲ್ಲಿ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.










