ಕರಾವಳಿ ಉತ್ಸವದಲ್ಲಿ ಸಾಂಪ್ರದಾಯಿಕತೆ, ಸಂಸ್ಕೃತಿ ಅನಾವರಣ- ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಡಿ. 19. ಹಲವು ವರ್ಷಗಳ ಬಳಿಕ ನಡೆಯಲಿರುವ ಕರಾವಳಿ ಉತ್ಸವದ ಕಾರ್ಯಕ್ರಮಗಳಲ್ಲಿ ಕರಾವಳಿಯ ನೈಜ ಸಂಸ್ಕೃತಿ ಸಾಹಿತ್ಯ, ಉಡುಗೆ ತೊಡುಗೆಗಳು  ಹಾಗೂ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟದ ಅಪೂರ್ವ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ಉತ್ಸವ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿ ಉತ್ಸವದಿಂದ ಕರಾವಳಿಯ ನೈಜ ಸಂಸ್ಕೃತಿಯ ಅನಾವರಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ವಿವಿಧ ಭಾಷೆ ಮತ್ತು ಜನಾಂಗಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಗುವುದು. ಕರಾವಳಿಯ ಪುರಾತನ ಸಂಸ್ಕೃತಿ ಹಾಗೂ ಖಾದ್ಯಗಳ ಮತ್ತು ತಿಂಡಿ ತಿನಿಸುಗಳ ತಯಾರಿಕೆ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

Nk Cake House

ಕರ್ನಾಟಕ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ ಅಕಾಡೆಮಿಗಳು ಈ ಕಾರ್ಯಕ್ರಮಗಳನ್ನು ನಡೆಸಲು ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದೆಂದು ಅವರು ಹೇಳಿದರು. ಇದಲ್ಲದೆ ವಿವಿಧ ಆಕರ್ಷಕ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪ್ರದರ್ಶನಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರಾವಳಿ ಉತ್ಸವ ಮೈದಾನದಲ್ಲಿ ಆಕರ್ಷಕ ವಸ್ತು ಪ್ರದರ್ಶನ ಮತ್ತು ಆಹಾರ ಮೇಳ ಡಿಸೆಂಬರ್ 21ರಿಂದ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.

Also Read  ಕೆಮ್ಮಾರ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಡಿಸೆಂಬರ್ 21ರಂದು ಕರಾವಳಿ ಉತ್ಸವದ ಉದ್ಘಾಟನೆ ಪ್ರಯುಕ್ತ ನಗರದ ಕೊಡಿಯಾಲ್‍ಬೈಲ್‍ನಿಂದ ಎಂ.ಜಿ ರಸ್ತೆಯಲ್ಲಿ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕರಾವಳಿ ಉತ್ಸವದ ಪ್ರಯುಕ್ತ ವಿವಿದೆಡೆ ಏರ್ಪಡಿಸಲಾಗಿರುವ ಬೀಚ್ ಉತ್ಸವ, ಯುವ ಉತ್ಸವ, ಸಸ್ಯಮೇಳ ಮತ್ತಿತರ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.

ವರ್ಷಾಂತ್ಯದಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ಜಿಲ್ಲೆಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಸಾಹಿತ್ಯ ಹಾಗೂ ತಿಂಡಿ ತಿನಿಸುಗಳ ಅರಿವು ಮೂಡಿಸುವ ಉದ್ದೇಶವೂ ಕರಾವಳಿ ಉತ್ಸವದಲ್ಲಿ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Also Read  ಕೊನೆಗೂ ಬಂತು ಕಡಬ ತಾಲೂಕು ಉದ್ಘಾಟನೆಗೆ ಅಧಿಕೃತ ಆದೇಶ..!! ► ಮಾ. 7 ಸಾಯಂಕಾಲ ಕಂದಾಯ ಸಚಿವರಿಂದ ನೂತನ ಕಡಬ ತಾಲೂಕಿಗೆ ಚಾಲನೆ, ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ

ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿನ್ ಸ್ಟಾನ್ಲಿ ಅಲ್ವಾರಿಸ್ ಅವರು ಮಾತನಾಡಿ, ಕರಾವಳಿ ಉತ್ಸವಕ್ಕೆ ಯಶಸ್ವಿಗೊಳಿಸಲು ಅಕಾಡೆಮಿ ವತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಮೂಡಾ ಆಯುಕ್ತೆ ನೂರ್‍ಜಹಾನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top